ಮಂಡ್ಯ ತಾಲೂಕಿನ ಹೊಡಾಘಟ್ಟ ಗ್ರಾಮದಲ್ಲಿ ವಿಷಪೂರಿತ ಹಾವೊಂದು ಕಚ್ಚಿದ ಪರಿಣಾಮ ಯುವಕನೊಬ್ಬ ಸಾವಿಗೀಡಾದ ದಾರುಣ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಹೊಡಾಘಟ್ಟ ಗ್ರಾಮದ ಎಚ್.ಬಿ.ಶಿವರಾಮು ಎಂಬುವರ ಮಗ ಎಚ್.ಎಸ್.ಉಲ್ಲಾಸ್ ಗೌಡ (27) ಎಂಬಾತನೇ ವಿಷಪೂರಿತ ಹಾವಿಗೆ ಬಲಿಯಾದ ಯುವಕ.
ಇಂದು ಮಧ್ಯಾಹ್ನ ಉಲ್ಲಾಸ್ ಗೌಡ ಜಮೀನಿಗೆ ನೀರು ಹಾಯಿಸಲು ತೆರಳಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ವಿಷಪೂರಿತ ಹಾವು ರೈತನಿಗೆ ಕಚ್ಚಿದೆ. ಆದರೆ ಆ ಕ್ಷಣ ಉಲ್ಲಾಸ ಗೌಡ ಹಾವು ಕಚ್ಚಿದೆ ಎಂಬುದು ಗೊತ್ತಾಗಿಲ್ಲ. ಸ್ವಲ್ಪ ಸಮಯದ ಬಳಿಕ ಆತನಿಗೆ ತಲೆ ಸುತ್ತು ಬಂದು ಬಿದ್ದಿದ್ದಾನೆ.
ನಂತರ ಗ್ರಾಮಸ್ಥರು ಅಲ್ಲಿಗೆ ಬಂದು ಆತನನ್ನು ಕೇಳಿದಾಗ ಆತ ಏನೋ ಕಚ್ಚಿದ ಹಾಗೆ ಆಯಿತು ಎಂದು ತಿಳಿಸಿದ್ದಾನೆ.ಕೂಡಲೇ ಆತನನ್ನು ಸ್ಯಾಂಜೋ ಆಸ್ಪತ್ರೆಗೆ ಕರೆತಂದಿದ್ದಾರೆ.ಅಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಲಾಗಿದೆ.ಅಲ್ಲಿಂದ ಮಂಡ್ಯ ಜಿಲ್ಲಾಸ್ಪತ್ರೆಗೆ ಕರೆತಂದು ಸೇರಿಸಿದ್ದಾರೆ. ಆದರೆ ಹಾವಿನ ವಿಷ ದೇಹದಲ್ಲೆಲ್ಲಾ ಹರಡಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಉಲ್ಲಾಸ್ ಗೌಡ ಮೃತಪಟ್ಟಿದ್ದಾನೆ.