ಅಯೋಧ್ಯೆಯ ರಾಮಮಂದಿರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯ ವಿರುದ್ಧ ಕಿಡಿಕಾರಿರುವ ಸಚಿವ ಪ್ರಿಯಾಂಕ್ ಖರ್ಗೆ, “ಅನಂತ ಕುಮಾರ್ ಹೆಗಡೆ ಅವರೇ, ಈಗ ಸಂವಿಧಾನದ ಕಾಲವೇ ಹೊರತು ಮನುಸ್ಮೃತಿಯ ಕಾಲವಲ್ಲ” ಎಂದು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಗ್ರಾಮೀಣಾಭಿವೃದ್ಧಿ ಸಚಿವ, “ಜನರು ಸಂಕಷ್ಟದಲ್ಲಿದ್ದಾಗ ನಿದ್ದೆಯಲ್ಲಿದ್ದು, ಚುನಾವಣೆ ಬಂದಾಗ ಎದ್ದು ಬರುವ ಅನಂತಕುಮಾರ್ ಹೆಗಡೆ ಅವರೇ, ಇಷ್ಟು ದಿನ ಎಲ್ಲಿ ಮಲಗಿದ್ರಿ? ಸಿಎಂ ಸಿದ್ದರಾಮಯ್ಯನವರನ್ನು ಬೈದರೆ ಟಿಕೆಟ್ ಸಿಗಬಹುದು ಎಂಬ ಭ್ರಮೆಯಲ್ಲಿ ಇದ್ದೀರಾ?” ಎಂದು ಟಾಂಗ್ ನೀಡಿದ್ದಾರೆ.
“ಸಂಸದರಾಗಿ ಉತ್ತರ ಕನ್ನಡಕ್ಕೆ ನಿಮ್ಮ ಕೊಡುಗೆ ಏನು? ಹಿಂದೆ ಕೌಶಲ್ಯಾಭಿವೃದ್ಧಿ ಸಚಿವರಾಗಿ ನಿಮ್ಮ ಸಾಧನೆ ಏನು? ಎಷ್ಟು ಹಿಂದೂ ಯುವಕರಿಗೆ ಕೌಶಲ್ಯ ನೀಡಿ ಉದ್ಯೋಗ ಕೊಡಿಸಿದ್ದೀರಿ? ಬಹುಶಃ ಪರರನ್ನು ನಿಂದಿಸುವುದೇ ನಿಮ್ಮ ಕೌಶಲ್ಯ ಇರಬಹುದು” ಎಂದು ಸಚಿವ ಖರ್ಗೆ ವ್ಯಂಗ್ಯವಾಡಿದ್ದಾರೆ.
“ಸಿದ್ದರಾಮಯ್ಯನವರು ತಮಗಿಂತ ವಯಸ್ಸಿನಲ್ಲಿ, ಅನುಭವದಲ್ಲಿ ಹಿರಿಯರಿದ್ದಾರೆ. ಸಂವಿಧಾನಾತ್ಮಕವಾಗಿ ಪ್ರಮುಖ ಸ್ಥಾನವಾದ ಸಿಎಂ ಹುದ್ದೆಯಲ್ಲಿದ್ದಾರೆ. ಇಂತಹವರಿಗೆ ಮನಬಂದಂತೆ ಮಾತನಾಡುವುದೇ ನಿಮ್ಮ ಧರ್ಮ ಪಾಲನೆಯೇ? ಅದೇ ನಿಮ್ಮ ಸನಾತನ ಸಂಸ್ಕೃತಿಯೇ? ಆದೇ ನಿಮ್ಮ ಹಿಂದುತ್ವವೇ?” ಎನ್ನುವ ಮೂಲಕ ಬಿಜೆಪಿ ಸಂಸದನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
“ಹಿಂದುಳಿದ ವರ್ಗದ ನಾಯಕರ ಬಗ್ಗೆ ವಿಕೃತ ವಿಷ ತುಂಬಿಕೊಂಡಿರುವ ಅನಂತ ಕುಮಾರ್ ಹೆಗಡೆ ಮನುವಿನ ಪಳೆಯುಳಿಕೆಯಂತಿದ್ದಾರೆ. ಈ ಅಹಂಕಾರದ ಮೂಲ ಎಲ್ಲಿದೆ ಎಂಬುದು ತಿಳಿಯದ ವಿಷಯವೇನಲ್ಲ, ಈ ಶೋಷಕ ಮನಸ್ಥಿತಿಯ ಠೇಂಕಾರಕ್ಕೆ ಈ ರಾಜ್ಯದ ಜನತೆ ಉತ್ತರ ನೀಡುತ್ತಾರೆ. ಸಂವಿಧಾನದ ಕಾಲವೇ ಹೊರತು ಮನುಸ್ಮೃತಿಯ ಕಾಲವಲ್ಲ ಎಂಬ ಎಚ್ಚರಿಕೆ ಇದ್ದರೆ ಒಳಿತು” ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
“ಬುದ್ಧ, ಬಸವಣ್ಣ, ನಾರಾಯಣಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕನಕದಾಸರಂತಹ ಮಹಾಪುರುಷರು ಹೇಳಿದ ಧರ್ಮ ನಮ್ಮದು. ಅನಂತ್ ಕುಮಾರ್ ಹೆಗಡೆಯಂತಹವರು ಧರ್ಮ ರಕ್ಷಣೆ ಮಾಡುವುದಿಲ್ಲ, ಧರ್ಮ ಭಕ್ಷಣೆ ಮಾಡುತ್ತಾರೆ. ಸಮಾಜದಲ್ಲಿ ಅಸಹ್ಯಗಳನ್ನು ಸೃಷ್ಟಿಸುತ್ತಾರೆ. ಹಿಂದೂ ಸಮಾಜ ಇಂತಹವರನ್ನು ಎತ್ತಿ ಎಸೆಯುವುದು ಖಚಿತ” ಎಂದು ತಿಳಿಸಿದ್ದಾರೆ.
“ಸರ್ವ ಧರ್ಮಗಳ ಜನರಲ್ಲಿ ಬಹುಪಾಲು ಹಿಂದೂಗಳು ತಮ್ಮ ತಾಕತ್ತು ತೋರಿಸಿದ್ದರಿಂದಲೇ ನಮಗೆ 136 ಸ್ಥಾನಗಳ ಅಭೂತಪೂರ್ವ ಗೆಲುವು ಪಡೆದಿದ್ದೇವೆ ಎನ್ನುವುದು ಅನಂತ್ ಕುಮಾರ್ ಹೆಗಡೆ ಎಂಬ ಅಜ್ಞಾನಿಗೆ ತಿಳಿದಿರಲಿ” ಎಂದು ಹೇಳುವ ಮೂಲಕ ಸಚಿವ ಖರ್ಗೆ, ಬಿಜೆಪಿ ಸಂಸದನಿಗೆ ಟಾಂಗ್ ನೀಡಿದ್ದಾರೆ.
ಏಕವಚನದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ನಿಂದಿಸಿದ್ದ ಬಿಜೆಪಿ ಸಂಸದ
ಕುಮಟಾದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಉತ್ತರ ಕನ್ನಡ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ, ಅಯೋಧ್ಯೆಯ ರಾಮಮಂದಿರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲೇ, “ನೀನು ಬಾ, ಇಲ್ಲ ಬಿಡು. ರಾಮ ಜನ್ಮಭೂಮಿ ಏನೂ ನಿಲ್ಲೋದಿಲ್ಲ ಮಗನೇ” ಎಂದು ನಿಂದಿಸಿದ್ದರು.
“ನಾನು ಅಯೋಧ್ಯೆಗೆ ಹೋಗುತ್ತೇನೆ. ಆದರೆ 22ಕ್ಕೆ ಹೋಗಲ್ಲ. ಆಮೇಲೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಮೊದಲು ಹೋಗಲ್ಲ ಅಂದಿದ್ದವರು ಈಗ ಹೋಗುತ್ತೇನೆ ಎನ್ನುತ್ತಿದ್ದಾರೆ. ಇದು ಹಿಂದೂ ಸಮಾಜದ ತಾಕತ್ತು, ಧಮ್ಮು” ಎಂದು ಹೆಗಡೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ರಾಜ್ಯ ರಾಜಕೀಯದಲ್ಲಿ ವಿವಾದವನ್ನು ಎಬ್ಬಿಸಿದೆ.