ಮಂಡ್ಯ ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳಿವಿಗಾಗಿ, ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು ಮಂಡ್ಯ ಜಿಲ್ಲೆಯ ಹಲವಾರು ಪ್ರಗತಿಪರ ಸಂಘಟನೆಗಳು ಪ್ರತಿಭಟನಾ ಧರಣಿ ಪ್ರಾರಂಭಿಸಿವೆ.
ಧರಣಿಯಲ್ಲಿ ಖ್ಯಾತ ಸಾಹಿತಿ ದೇವನೂರ ಮಹದೇವ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ವಿಚಾರವಾದಿ ಪ್ರೊ.ಕಾಳೇಗೌಡ ನಾಗವಾರ, ಮುಖಂಡರಾದ ಸುಮಿತ್ರಮ್ಮ, ರಾಮಚಂದ್ರಪ್ಪ, ಜಗದೀಶ್ ಕೊಪ್ಪ, ಶ್ರೀಪಾದ್ ಭಟ್, ಗುರುಪ್ರಸಾದ್ ಕೆರಗೋಡು, ಅನಂತ ನಾಯಕ್, ಆದರ್ಶ, ವೆಂಕಟಗಿರಿಯಯ್ಯ, ಹಾಡುಗಾರ ಜನಾರ್ದನ್(ಜನ್ನಿ) ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದಾರೆ. ಡಿ.ದೇವರಾಜ ಅರಸು ಹಿಂದುಳಿದ ವೇದಿಕೆ ಅಧ್ಯಕ್ಷ ಎಲ್.ಸಂದೇಶ್ ಗಣ್ಯರನ್ನು ಸ್ವಾಗತಿಸಿದರು.
ಮಂಡ್ಯ ಜಿಲ್ಲೆಯ ಜನರ ಧರ್ಮ ಉಳುಮೆ. ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು. ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಭಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ, “ಧರ್ಮ ಮತ್ತು ದೇವರನ್ನು ಓಟು ಬಾಚಿಕೊಳ್ಳುವ ಸಾಧನ ಮಾಡಿಕೊಂಡು, ಅಧಿಕಾರದ ಸಿಂಹಾಸನವೇರಲು ಜನರ ಬದುಕನ್ನು ಮೆಟ್ಟಿಲು ಮಾಡಿಕೊಳ್ಳಲಾಗುತ್ತಿದೆ.’ ಇದು ಆತಂಕಕಾರಿ ವಿಚಾರವಾಗಿದೆ ಎಂದು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಸಕಲೆಂಟು ಜಾತಿಯ ಜನರು ಪರಸ್ಪರ ಪ್ರೀತಿ, ವಿಶ್ವಾಸದಿಂದ ಶತಮಾನಗಳಿಂದ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ತನ್ನ ಕಟ್ಟೆಮನೆಯ ನಿಷ್ಠುರ ನ್ಯಾಯಗಳಿಂದ ಪ್ರಖ್ಯಾತಿ ಪಡೆದ ಊರು ಕೆರಗೋಡು, ಆದರೆ ಇತ್ತೀಚಿನ ಧ್ವಜ ವಿವಾದವು ಕೆರಗೋಡಿನ ಶಾಂತಿ, ಸಹಬಾಳ್ವೆಯ ಬದುಕಿಗೆ ಬೆಂಕಿ ಇಟ್ಟಿದೆ. ಹಬ್ಬ ಹರಿದಿನಗಳಲ್ಲಿ ಮದುವೆ ಸಂಭ್ರಮಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಕೆರಗೋಡು ಈಗ ಆರೆಸ್ಸೆಸ್, ಬಿಜೆಪಿ ಮತ್ತು ಸಂಘ ಪರಿವಾರದ ಕೇಸರಿ ಬಣ್ಣದ ಬಾವುಟ, ತೋರಣ ಸುತ್ತಿಕೊಂಡು ಭೀಕರವಾಗಿ ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಧಾರ್ಮಿಕ ಆಚರಣೆಯಂತೆ ಕಂಡರೂ ಇದರ ಹಿಂದೆ ಜಾತಿ ಹಾಗೂ ಮತೀಯ ಗಲಭೆಗಳನ್ನು ಸೃಷ್ಟಿಸಿ ಚುನಾವಣಾ ಲಾಭ ಹೊಡೆಯುವ ಹುನ್ನಾರದಂತೆ ಕಾಣುತ್ತಿದೆ. ಇದಕ್ಕೆ ಅಂತ್ಯವಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೋಮುಶಕ್ತಿಗಳು ಮನೆ ಮುರುಕರು ಚುನಾವಣೆಯ ಹತ್ತಿರವಿರುವ ಸಂದರ್ಭದಲ್ಲಿ ಚುರುಕಾಗಿದ್ದಾರೆ. ಸಮಸ್ಯೆಯೇ ಅಲ್ಲದ ವಿಚಾರವನ್ನು ಬೆಳೆಸಿ ಬೆಟ್ಟ ಮಾಡಿ ಜನರನ್ನು ಆತಂಕಕ್ಕೆ ದೂಡಿದ್ದಾರೆ. ಸಂವಿಧಾನದ ಎಲ್ಲಾ ಆಶಯಗಳನ್ನು ಕಾಲಡಿ ತುಳಿದು ಕೇಕೆ ಹಾಕುತ್ತಾ ವಿಕೃತ ಸುಖ ಅನುಭವಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು. ನೇಗಿಲ ಧರ್ಮದ, ಉಳುಮೆ ಸಂಸ್ಕೃತಿಯ, ಹಸಿರನ್ನೇ ಉಸಿರಾಗಿಸಿಕೊಂಡ ಮಂಡ್ಯದ ಜನತೆಯ ಮುಂದೆ ಜಿಲ್ಲೆಯನ್ನು ಕುವೆಂಪುರವರ ಆಶಯದಂತೆ “ಸರ್ವ ಜನಾಂಗದ ಶಾಂತಿಯ ತೋಟವಾಗಿ ಉಳಿಸಿಕೊಳ್ಳುವ, ಅದನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಿಕೊಳ್ಳುವ ಸವಾಲಿದೆ. ಆ ಸವಾಲನ್ನು ನಾವು ಸ್ವೀಕರಿಸಲೇಬೇಕಿದೆ. ಕೆರಗೋಡಿನಲ್ಲಿ ಹತ್ತಿರುವ ನೆಲಹುಲ್ಲಿನ ಬೆಂಕಿ ಇಡೀ ಜಿಲ್ಲೆಗೆ, ನಾಡಿಗೆ ಹರಡುವ ಮುನ್ನ ಬದುಕು ಮತ್ತು ಸಾಮರಸ್ಯವನ್ನು ಬಲಿ ತೆಗೆದುಕೊಳ್ಳುವ ಮುನ್ನ ನಾವು ನೀರು ಹಾಕಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.