ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಯಡಿ ಘೋಷಣೆ ಮಾಡಿದ್ದಂತೆ 200 ಯೂನಿಟ್ ವಿದ್ಯುತ್ ಅನ್ನು ಯಾವುದೇ ನಿಬಂಧನೆ ಇಲ್ಲದೇ ಜಾರಿಗೆ ತರಬೇಕೆಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಮಂಡ್ಯ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರವು ಈಗ 12 ತಿಂಗಳ ಸರಾಸರಿ ಲೆಕ್ಕದಲ್ಲಿ ವಿದ್ಯುತ್ ನೀಡುವುದಾಗಿ ಹೇಳಿದೆ, ಇದರಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತೊಂದರೆಗೆ ಸಿಲುಕಿದ್ದಾರೆ. 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವುದು ಸರ್ಕಾರದ ನಿರ್ಧಾರವಾಗಬೇಕು. ಜನತೆಗೆ ಹೆಚ್ಚೆಚ್ಚು ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಗೋವು ನಮಗೆ ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪ ನೀಡುವುದು ಅಷ್ಟೇ ಅಲ್ಲದೇ ನಮ್ಮ ದೇಶದ ಕೃಷಿ ಭೂಮಿಯನ್ನು ಫಲವತ್ತಾಗಿಸುತ್ತದೆ. ನಮ್ಮ ದೇಶದ ಕೃಷಿ, ಗೋವು, ಎತ್ತು ಮತ್ತು ಹೋರಿಗಳನ್ನು ಅವಲಂಬಿಸಿದೆ. ಹಾಗಾಗಿ ಅವುಗಳನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಮ್ಮ ದೇಶದ ಸಂಸ್ಕೃತಿಯಲ್ಲಿ ಕೋಳಿ, ಕುರಿ, ಮೇಕೆ ಮತ್ತು ಇತ್ಯಾದಿ ಪಾಣಿಗಳನ್ನು ಆಹಾರಕ್ಕಾಗಿ ಉಪಯೋಗಿಸುವುದು ಉಂಟು ಆದರೆ, ಹಸು, ಎತ್ತು, ಹೋರಿಗಳನ್ನು ಮನುಷ್ಯನ ಆಹಾರಕ್ಕಾಗಿ ಉಪಯೋಗಿಸುವುದು ತುಂಬಾ ವಿರಳ. ಹಾಗಾಗಿ ಗೋವುಗಳನ್ನು ರಕ್ಷಣೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಎಸ್.ಪಿ.ಸ್ವಾಮಿ, ಡಾ.ಇಂದ್ರೇಶ್, ಸಿ.ಟಿ.ಮಂಜುನಾಥ್, ರಮೇಶ್, ವಿವೇಕ್, ಹರ್ಷ, ಪ.ನಾ.ಸುರೇಶ್ ಮತ್ತಿತರರು ಭಾಗವಹಿಸಿದ್ದರು.