ಸಂಸತ್ ಭವನದಲ್ಲಿ ಬುಧವಾರ ದಾಂಧಲೆ ನಡೆಸಿದ್ದ ಇಬ್ಬರು ಯುವಕರಿಗೆ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದರು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರತಾಪ್ ಸಿಂಹ ಅವರೇ ಪಾಸ್ ನೀಡಿದ್ದರು ಎಂಬುದನ್ನು ತಿಳಿದ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪ್ರತಾಪ್ ಸಿಂಹ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಪ್ರತಾಪ್ ಸಿಂಹ ಅಮಾನತಿಗೆ ಆಗ್ರಹಿಸಿದ್ದಾರೆ. ಪ್ರತಿಭಟನೆ ನಡೆದ ಹಿನ್ನೆಲೆ, ಮುಂಜಾಗ್ರತಾ ಕ್ರಮವಾಗಿ ಸಂಸದರ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಲೋಕಸಭೆಯಲ್ಲಿ ನಡೆದ ಘಟನೆಗೆ ಯಾರು ಹೊಣೆ? ಒಂದು ವೇಳೆ, ಕಾಂಗ್ರೆಸ್ ಸಂಸದರು ಪಾಸ್ ನೀಡಿದ್ದರೆ, ಬಿಜೆಪಿಗರು ನಮಗೆ ದೇಶವಿರೋಧಿ ಪಟ್ಟ ಕಟ್ಟುತ್ತಿದ್ದರು. ರಾತ್ರೋರಾತ್ರಿ ಗಲ್ಲಿಗೇರಿಸುತ್ತಿದ್ದರು. ಆದರೆ, ಈಗ ಬಿಜೆಪಿ ಸಂಸದರೇ ಪಾಸ್ ನೀಡಿದ್ದಾರೆ. ಈಗವರೆಗೆ ಅವರನ್ನು ಏಕೆ ವಿಚಾರಣೆ ಕರೆದಿಲ್ಲ” ಎಂದು ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದು, “ಗದ್ದಲ ಸೃಷ್ಠಿಸಿದ ಯುವಕರಿಗೆ ಪ್ರತಾಪ್ ಸಿಂಹ ಅವರು ಪಾಸ್ ನೀಡಿದ್ದಾರೆ. ಅವರಿಗೆ ಯುವಕರ ಬಗ್ಗೆ ತಿಳಿದಿದ್ದರಿಂದಲೇ ಪಾಸ್ ನೀಡಿದ್ದಾರೆ. ಪ್ರತಾಪ್ ಸಿಂಹ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಬೇಕು. ಘಟನೆಯ ಬಗ್ಗೆ ಪ್ರಧಾನಿ ಮತ್ತು ಗೃಹ ಸಚಿವರು ಪ್ರತಿಕ್ರಿಯೆ ನೀಡದೇ ಇರುವುದು ಆಶ್ಚರ್ಯ ತಂದಿದೆ” ಎಂದು ಹೇಳಿದ್ದಾರೆ
ಬುಧವಾರ ಸಂಸತ್ನಲ್ಲಿ ನಡೆದ ಘಟನೆ ಸಂಬಂಧ ಇದೂವರೆಗೂ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಮೈಸೂರು ಮೂಲದ ಮನೋರಂಜನ್ ಎಂದು ತಿಳಿದುಬಂದಿದೆ.