ನಾನು ರೈತರ ಪರ,ನಾನು ರೈತನ ಮಗ ಎಂದು ಹಸಿರು ಶಾಲು ಹಾಕೊಂಡು ಪ್ರಮಾಣ ವಚನ ಸ್ವೀಕರಿಸಿ ರೈತರ ಯಾಮಾರಿಸುವವರಿಗೆ ಓಟು ಹಾಕದೆ ರೈತಂಗೆ ಓಟು ಹಾಕಬೇಕು, ಇಲ್ಲದಿದ್ದರೆ ರೈತನಿಗೆ ನ್ಯಾಯ ಸಿಗಲ್ಲ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಧುಚಂದನ್ ಕಿಡಿಕಾರಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ರೈತರ ಹೋರಾಟಕ್ಕೆ ಪಕ್ಷಾತೀತವಾಗಿ ಜನರು ಬಂದಿದ್ದಾರೆ.ಆದರೆ ಒಬ್ಬನೇ ಒಬ್ಬ ಆಕಾಂಕ್ಷಿಗಳು ಇಲ್ಲಿಗೆ ಬಂದಿಲ್ಲ.ಇವರಿಗೆ ನಾಚಿಕೆ ಆಗಬೇಕು.ಯಾತ್ರೆ ಮಾಡಿಸುತ್ತಾ ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇವತ್ತಿನ ಉದಯೋನ್ಮುಖ ರಾಜಕಾರಣಿ ಒಬ್ಬ ಗದ್ದೆಗೆ ಔಷಧಿ ತಗೊಂಡು ಹೋಗೋರೆ ಅಂದ್ರೆ ಮನೇಲೆ ಕುಡಿಬಹುದಿತ್ತಲ್ವಾ ಅಂತಾನೆ,ಉಪ್ಪು ಗದ್ದೆಗೇಕೆ ಅಡುಗೆಗೆ ಹಾಕಲ್ವಾ ಅಂತಾನೆ.ಇವರಿಗೆ ರೈತರ ಭಾಷೆ ಅರ್ಥವಾಗಲ್ಲ.ಆತನಿಗೆ ಕುಂಟೆ ಅಂದ್ರೆ ಗೊತ್ತಿಲ್ಲ,ಪಟ ಅಂದ್ರೆ ಗೊತ್ತಿಲ್ಲ, ಮುರಿ ಮಾಡೋದು ಅಂದ್ರೆ ಪುರಿ ಅಂತಾನೆ ಇಂತವರನ್ನ ಚುನಾಯಿಸುವ ಬದಲು ರೈತನನ್ನೇ ಚುನಾಯಿಸಬೇಕು ಎಂದರು.
ನಾವೆಲ್ಲರೂ ಕಳೆದ ಹತ್ತು ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ.ಚುನಾವಣೆ ಬಂದರೂ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕೂತೇ ಚುನಾವಣೆ ಎದುರಿಸುತ್ತೇವೆ ಎಂದು ಸವಾಲು ಹಾಕಿದರು.