ಮಂಡ್ಯದ ಪ್ರಖ್ಯಾತ, ಜನಪರ ಚರ್ಮ ವೈದ್ಯ ಐದು ರೂಪಾಯಿಯ ಡಾಕ್ಟರ್ ಎಂದು ಖ್ಯಾತರಾಗಿರುವ ಡಾ.ಶಂಕರೇಗೌಡರಿಗೆ ಹೃದಯಘಾತವಾಗಿದೆ.
ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಯಾವುದೇ ರೀತಿಯ ಪ್ರಾಣಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ / ಹಲವಾರು ಮಂದಿ ವಾಟ್ಸ್ಪಪ್ ಸ್ಟೇಟಸ್ ಗಳಲ್ಲಿ ಅವರ ಭಾವಚಿತ್ರ ಹಾಕಿಕೊಂಡು ಶಂಕರೇಗೌಡರು ನಿಧನರಾಗಿದ್ದರೆಂದು ವೈರಲ್ ಮಾಡುತ್ತಿದ್ದಾರೆ. ಆದರೆ ಶಂಕರೇಗೌಡರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಕುಟುಂಬದವರು ಅತೀವ ಒತ್ತಡದಲ್ಲಿರುತ್ತಾರೆ, ಅವರಿಗೆ ಚೈತನ್ಯ ತುಂಬುವ ಕೆಲಸ ಮಾಡಬೇಕು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನತೆಗೆ ಅಪೂರ್ಣ ಮಾಹಿತಿ ಇದ್ದು, ಸುಳ್ಳು ಸುದ್ದಿಯನ್ನು ನಿಜವೆಂದು ನಂಬಿದ್ದಾರೆ. ಆದರೆ, ಅವರ ಕುಟುಂಬದವರು ಯಾವುದೇ ಪ್ರಾಣಪಾಯವಿಲ್ಲವೆಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಶಂಕರೇಗೌಡರಿಗೆ ಹೃದಯಘಾತವಾದ ನಂತರ ಕೂಡಲೇ ಮೈಸೂರಿನ ತೆರಳಿ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಹೃದಯದ ಮೂರು ರಕ್ತನಾಳಗಳು ಬ್ಲಾಕ್ ಆಗಿರುವುದರಿಂದ ಸ್ಟಂಟ್ ಚಿಕಿತ್ಸೆ ಮಾಡಬೇಕಾಗಬಹುದು. ಸದ್ಯಕ್ಕೆ ಕುಟುಂಬದವರ ಜೊತೆ ಮಾತನಾಡುತ್ತಿದ್ದಾರೆ. ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಆರ್.ಪಿ.ರಸ್ತೆಯ ತಾರಾ ಕ್ಲಿನಿಕ್ ನ ಮಂಡ್ಯದ ವೈದ್ಯರಾದ ಶಂಕರೇಗೌಡರು ಜನಪರ ವೈದ್ಯರಾಗಿ, ಐದು ರೂ ಶುಲ್ಕವನ್ನು ಮಾತ್ರ ತೆಗೆದುಕೊಳ್ಳುವ ಮತ್ತು ಚಿಕಿತ್ಸೆ ಪರಿಣಾಮಕಾರಿಯಾಗಿ ವಾಸಿ ಮಾಡುವ ವೈದ್ಯರೆಂದು ಮನೆಮಾತಾಗಿದ್ದರು.
ರಜಾ ದಿನಗಳಲ್ಲಿ ಚಿಕಿತ್ಸೆಗೆಂದು ತಮ್ಮ ಊರಾದ ಶಿವಳ್ಳಿಗೆ ಬಂದಾಗ ರೋಗಿಗಳಿಂದ ಯಾವುದೇ ಶುಲ್ಕವನ್ನು ಪಡೆಯದೆ ಚಿಕಿತ್ಸೆ ನೀಡುತ್ತಿದ್ದರು.
ಡಾ.ಶಂಕರೇಗೌಡರು ಮಂಡ್ಯಕ್ಕೆ ಮಾತ್ರ ಪ್ರಸಿದ್ದಿ ಪಡೆದ ವೈದ್ಯರಾಗದೆ, ಕರ್ನಾಟಕ ಮತ್ತು ಭಾರತದ ವಿವಿಧ ಜಿಲ್ಲೆಗಳಿಂದ, ಊರುಗಳಿಂದ ಇವರ ಬಳಿ ಚಿಕಿತ್ಸೆ ಪಡೆಯಲು ಬರುತ್ತಿದ್ದರು.
ಪ್ರತಿದಿನವು ನೂರಾರು ಮಂದಿ ಕ್ಲಿನಿಕ್ ಬಳಿ ಚಿಕಿತ್ಸೆಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದರು. ರೋಗಿಗಳು ಎಷ್ಟೇ ಬಂದರೂ, ಬರದಿದ್ದರೂ, ಯಾವ ಊರಿನಿಂದ ಬಂದರು ಅವರು ತೆಗೆದುಕೊಳ್ಳುತ್ತಿದ್ದ ಶುಲ್ಕ ಐದು ರೂಪಾಯಿಗಳು ಮಾತ್ರ.