ಜಿಲ್ಲೆಯಲ್ಲಿ ಯಥೇಚ್ಛವಾಗಿ ಸಂಪತ್ಭರಿತ ಸಂಪನ್ಮೂಲಗಳಿದ್ದು, ರೈತರು ಅದರ ಸದ್ಭಳಕೆಯತ್ತ ಗಮನ ಹರಿಸಬೇಕು ಎಂದು ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಶಿವಲಿಂಗಯ್ಯ ಸಲಹೆ ನೀಡಿದರು.
ಮಂಡ್ಯ ತಾಲ್ಲೂಕಿನ ಹುಳ್ಳೇನಹಳ್ಳಿ ಗ್ರಾಮದಲ್ಲಿ ಎಸ್ಬಿಐ ಪ್ರಾದೇಶಿಕ ಕಚೇರಿ, ಎಸ್ಬಿಐನ ಕೃಷಿ ಅಭಿವೃದ್ಧಿ ಶಾಖೆಯ ವತಿಯಿಂದ ನಡೆದ ರೈತಮಿತ್ರ ಯೋಜನೆಯಡಿ ಶೂನ್ಯ ಸುಸ್ತಿದಾರರ ಗ್ರಾಮಕ್ಕೆ ಎಸ್ಬಿಐ ಬಂಪರ್ ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಪನ್ಮೂಲಗಳಗಳನ್ನು ಬಳಸಿಕೊಂಡು ಕೃಷಿ ಉತ್ಪನ್ನಗಳನ್ನು ತಯಾರು ಮಾಡುವ ಮೂಲಕ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಗಬೇಕು. ಸಾಕಷ್ಟು ಸಂಪನ್ಮೂಲಗಳರುವ ನಮ್ಮ ಜಿಲ್ಲೆಯಲ್ಲಿ ಕೈಗಾರೀಕರಣದ ಕೊರತೆ ಎದ್ದು ಕಾಣುತ್ತಿದೆ. ಅದನ್ನು ಸರಿಪಡಿಸಿಕೊಂಡರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಣ್ಣ ಕೈಗಾರಿಕೆ, ದೊಡ್ಡ ಕೈಗಾರಿಕೆ, ರಸ್ತೆ, ನೀರು, ರೈಲು ಹಾಗೂ ಸಾರಿಗೆ ಸಂಪರ್ಕ ಸೇರಿದಂತೆ ಇತರೆ ಕೆಲಸ ಕಾರ್ಯಗಳಿಗೆ ಸುಶಿಕ್ಷಿತವಾದ ತಾಂತ್ರಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕು. ಕೈಗಾರಿಕೆಯಲ್ಲಿ ರಾಮನಗರ, ತುಮಕೂರು, ಮೈಸೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಗಿಂತ ಬಹಳ ಹಿಂದುಳಿದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾಗಮಂಗಲ, ಮಂಡ್ಯ ತಾಲ್ಲೂಕಿನ ನೊದೆಕೊಪ್ಪಲು ಸೇರಿದಂತೆ ಹಲವೆಡೆ ಕೈಗಾರೀಕರಣಕ್ಕೆ ಸ್ಥಳ ಪರಿಶೀಲನೆ ನಡೆದಿದೆ. ಜಿಲ್ಲೆಯಲ್ಲಿ ಶಿಕ್ಷಣ ಜ್ಞಾನ ಹೊಂದಿರುವವರು ಹೆಚ್ಚಿದ್ದಾರೆ, ಅವರಿಗೆ ಅನುಕೂಲವಾಗುವಂತಹ ಕೈಗಾರೀಕರಣ ಆಗಬೇಕು. ಜಾಗರಿಪಾರ್ಕ್ ಮಾಡುವುದರಿಂದ ರೈತರಿಗೆ ಅನುಕೂಲವಾಗಲಿದೆ. ಇವೆಲ್ಲವನ್ನೂ ಒಟ್ಟಾರೆಯಾಗಿ ಬಳಸಿಕೊಳ್ಳುವ ಮನೋಭಾವ ಮುಖ್ಯವಾಗಬೇಕು ಎಂದು ತಿಳಿಸಿದರು.
ಎಸ್ಬಿಐ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸಂಧ್ಯಾ ಮಾತನಾಡಿ, ರೈತರಿಗೆ ಎಸ್ಬಿಐ ಬ್ಯಾಂಕ್ ಯೋಜನೆಗಳಿಂದ ಅನುಕೂಲವಿದೆ. ಅದರ ಸದ್ಭಳಕೆ ಆಗಬೇಕು. ಬೆಳೆಸಾಲ, ಕಿಸಾನ್ ಕ್ರೆಡಿಟ್ ಕಾರ್ಡ್, ಚಿನ್ನದ ಮೇಲಿನ ಸಾಲ, ಗ್ರಾಮೀಣ ಉದ್ಯೋಗ ಸಾಲ, ತೋಟಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ಕೋಳಿಸಾಕಾಣಿಕೆ, ಆತ್ಮನಿರ್ಭರ ಯೋಜನೆ ಸೇರಿದಂತೆ ಇತರೆ ಸೌಲಭ್ಯಗಳ ಅನುಕೂಲಗಳನ್ನು ರೈತರು ಸದುಪಯೋಗ ಪಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೈತ ಮುಖಂಡ ಹಾಡ್ಯ ರಮೇಶ್ರಾಜು ಮಾತನಾಡಿ, ರೈತರಿಗೆ ನೀಡುವ ಸಬ್ಸಿಡಿ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದರು.
ಎಸ್ಬಿಐನ ಪ್ರಧಾನ ವ್ಯವಸ್ಥಾಪಕ ಅನುರಾಗ್ ಜೋಷಿ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ಅನಿಲ್ಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಲಿತಾ ಚಿಕ್ಕಣ್ಣ ಇತರರು ಭಾಗವಹಿಸಿದ್ದರು.