ಮಂಡ್ಯನಗರ ರೈತರ ಸೊಸೈಟಿ ಆವರಣದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮವು ಸಂಭ್ರಮದಿಂದ ನಡೆಯಿತು.
ಮಂಡ್ಯ ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಜಿಲ್ಲಾ ಘಟಕ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ದವಸ-ಧ್ಯಾನಗಳ ರಾಶಿಗೆ ಪೂಜೆ ಸಲ್ಲಿಸಲಾಯಿತು. ನೇಗಿಲು, ಕೃಷಿ ಉತ್ಪನ್ನ ವಸ್ತುಗಳನ್ನು ಜೋಡಿಸಿ, ರಾಸುಗಳೊಂದಿಗೆ ರಾಶಿ ಪೂಜೆ ಮಾಡಿ, ಅನ್ನದಾತರ ಶ್ರೋಯೋಭಿವೃದ್ದಿಗೆ ಘೋಷಣೆಗಳನ್ನು ಕೂಗಲಾಯಿತು. ತಮಟೆ-ನಗಾರಿ ಸದ್ದಿನೊಂದಿಗೆ ಪೂಜಾಕುಣಿತ ನಡೆದದ್ದು ಎಲ್ಲರ ಗಮನ ಸೆಳೆಯಿತು. ಅನಂತರ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು, ಬಳಿಕ ಪೊಂಗಲ್-ಸಿಹಿ ವಿತರಣೆ ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಪರಿವರ್ತನ ಸಂಸ್ಥೆಯ ಪುಟ್ಟೇಗೌಡ, ರೈತ ನಾಯಕಿ ಸುನಂದ ಜಯರಾಮ್, ರೈತೋತ್ಪಾದಕ ಕಂಪನಿಯ ಬಸವರಾಜು, ಕೌಶಲಜ್ಞಾನ ಅಭಿವೃದ್ದಿ ಅಧಿಕಾರಿ ವೇಣುಗೋಪಾಲ್, ನೇಗಿಲಯೋಗಿ ಸಂಸ್ಥೆ ಮಹಿಳಾಧ್ಯಕ್ಷೆ ಸುಜಾತ ಸಿದ್ದಯ್ಯ, ಸದಸ್ಯರಾದ ಡಾ.ಎಸ್ ನಾರಾಯಣ್, ಅನುಪಮ, ರೈತ ಮುಖಂಡ ಮುದ್ದೇಗೌಡ, ಸುಶಿಲಮ್ಮ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.
ರೈತರು ಕೃಷಿ ಉತ್ಪನ್ನಗಳ ಉದ್ಯಮಿಗಳಾಗುವುದು ಅವಶ್ಯ
ಈ ಸಂದರ್ಭದಲ್ಲಿ ಮಾತನಾಡಿದ ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರಮೇಶ್, ಪ್ರಸ್ತುತ ದಿನಗಳಲ್ಲಿ ರೈತರು ಕೃಷಿ ಉತ್ಪನ್ನಗಳ ಉದ್ಯಮಿಗಳಾಗುವುದು ಅವಶ್ಯವಿದೆ. ಸಂಕ್ರಾಂತಿ ರೈತ ಸಂಕೃಷಿಯ ಅಸ್ಮಿತೆ, ಕೃಷಿಯು ಸಂಸ್ಕೃತಿಯ ಜೀವಾಳವಾಗಿದೆ, ರೈತರ ಸಂಭ್ರಮವನ್ನು ರಾಸುಗಳ ಸಡಗರವನ್ನು ಹೆಚ್ಚಿಸುವಲ್ಲಿ ನೆರವಾಗಿದೆ, ರೈತ ಉತ್ಪಾದಕ ಕಂಪನಿಗಳ ಸ್ಥಾಪಿಸಲು ನೇಗಿಲಯೋಗಿ ಸಂಸ್ಥೆ ಮುಂದಾಗಿದೆ ಎಂದರು.
ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆಯ ಕಾರ್ಯ ಸಾಧನೆಗಳನ್ನು ಕಂಡ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಉತ್ಪಾದಕ ಕಂಪನಿಗಳನ್ನು ನೀಡಲು ಮುಂದಾಗಿವೆ, ಮುಂದಿನ ದಿನಗಳಲ್ಲಿ ಸಂಸ್ಥೆ ವತಿಯಿಂದ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗುವುದು ಎಂದು ನುಡಿದರು.
ಒಟ್ಟು 14 ಕಂಪನಿಗಳು ಸಂಸ್ಥೆ ಮೂಲಕ ಆರಂಭಗೊಳ್ಳಲಿದ್ದು, ಮಂಡ್ಯದಲ್ಲಿ 9, ಮೈಸೂರಿನಲ್ಲಿ 5, ಮಡಿಕೇರಿಯಲ್ಲಿ 3 ಕಂಪನಿಗಳು ನೋಂದಾವಣಿಯಾಗಿವೆ, ಪ್ರಾರಂಭವಾಗಲು ಕಾರ್ಯೋನ್ಮುಖವಾಗುತ್ತಿವೆ, ಜಲಾಯನ ಇಲಾಖೆ ಆಯಕ್ತರಾದ ಡಾ.ವೆಂಕಟೇಶ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಹಕಾರದಿಂದ ಸಾಧ್ಯವಾಗುತ್ತವೆ ಎಂದು ಸ್ಮರಿಸಿದರು.
ನಿವೃತ್ತ ಅಭಿಯಂತರರಾದ ಬಸವರಾಜು ಅವರ ಸಹಕಾರದಲ್ಲಿ ರೈತ ಉತ್ಪಾದಕ ಕಂಪನಿಗಳು ಮಂಡ್ಯ ನೆಲದಲ್ಲಿ ಆರಂಭಗೊಳ್ಳುತ್ತಿವೆ, ಇಂತಹ ಸೇವಾಕಾರ್ಯದ ಮೂಲಕ ಸಮಾಜಮುಖಿಯಾಗಿತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಮಂಡ್ಯ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಶೋಕ್, ಮುಖ್ಯಮಂತ್ರಿಗಳು ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಂಡ್ಯ ಜಿಲ್ಲೆಯ ಸರಾಸರಿ ಭತ್ತ ರಾಗಿ ಇಳುವಳಿ ಎಷ್ಟಿದೆ ಎಂದು ಕೇಳಿದರು, ರಾಜ್ಯದ ಇಳುವರಿಗಿಂತ ಹೆಚ್ಚಿದೆಯಾ, ಕಡಿಮೆ ಇದೆಯಾ ಅಂತ ಮಾಹಿತಿಯನ್ನು ಪರಿಶೀಲಿಸಿದಾಗ 10-15ವರ್ಷಗಳ ಮಾಹಿತಿಯಲ್ಲಿ ತುಂಬ ಆಶ್ಚರ್ಯ ಮತ್ತು ಭಯ ಉಂಟುಮಾಡಿದೆ ಎಂದು ಹೇಳಿದರು.
2010-11ರಲ್ಲಿ ಒಂದು ಹೆಕ್ಟರ್ ಪ್ರದೇಶದಲ್ಲಿ ಶೇ.59.33 ರಷ್ಟು ಕ್ವಿಂಟಾಲ್ ಭತ್ತ ಉತ್ಪಾದನೆಯಾಗುತ್ತಿತ್ತು, 2022-23ರಲ್ಲಿ ಶೇ.44.05ರಷ್ಟು ಕ್ವಿಂಟಾಲ್ ಭತ್ತ ಕುಸಿತ ಕಂಡಿದೆ, ಶೇ.14 ಕ್ವಿಂಟಾಲ್ ಗೆ ಕುಸಿತವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯದ ಸರಾಸರಿಗಿಂತ ಶೇ.15ರಷ್ಟು ಹೆಚ್ಚು ಭತ್ತವನ್ನು ಮಂಡ್ಯ ಜಿಲ್ಲೆಯ ರೈತರ ಬೆಳೆಯುತ್ತಿದ್ದರು, ರಾಗಿ ಬೆಳೆಯು ಕೂಡ ಹೆಚ್ಚಿತ್ತು, ಈಗ 2 ಬೆಳೆಯು ಕಡಿಮೆಯಾಗಿದೆ, ಇದಕ್ಕೆ ಕಾರಣ ಮತ್ತು ಪರಿಹಾರವನ್ನು ಕಂಡಕೊಳ್ಳಬೇಕಿದೆ ಎಂದು ನುಡಿದರು.