ಸೆಪ್ಟೆಂಬರ್ 28 ರಿಂದ ಅಕ್ಟೋಬರ್ 2 ರವರೆಗೆ ಶ್ರೀರಂಗಪಟ್ಟಣ ದಸರಾವನ್ನು ವಿಜೃಂಭಣೆಯಿಂದ, ಪಾರಂಪರಿಕ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಅಶ್ವತಿ ಅವರು ತಿಳಿಸಿದರು.
ಮಂಡ್ಯದ ಜಿ.ಪಂ.ನ ಕಾವೇರಿ ಸಭಾಂಗಣದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಈ ಬಾರಿ ಐದು ದಿನಗಳ ದಸರಾ ಕಾರ್ಯಕ್ರಮ ನಡೆಯುತ್ತಿದ್ದು, ವಿವಿಧ ಇಲಾಖೆಗಳು ವೈವಿಧ್ಯಮಯ, ಆಕರ್ಷಣೀಯ, ಸಾರ್ವಜನಿಕರಿಗೆ ಮಾಹಿತಿ ಹಾಗೂ ಮನರಂಜನೆಯುತವಾಗಿರುವ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸೂಚಿಸಿದರು.
ಸೆಪ್ಟೆಂಬರ್ 28 ರಂದು ಜಂಬೂ ಸವಾರಿ ನಡೆಯುವ ಸ್ಥಳದಲ್ಲಿ ಬನ್ನಿಮಂಟಪದಲ್ಲಿ ಸಣ್ಣ ಪುಟ್ಟ ರಿಪೇರಿಗಳಿದ್ದಲ್ಲಿ ಕೈಗೊಳ್ಳಬೇಕು. ಬನ್ನಿಮಂಟಪ, ಕಲ್ಯಾಣಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಮೆರವಣಿಗೆ ಸಾಗುವ ಸ್ಥಳದಲ್ಲಿ ಸ್ವಚ್ಛತೆ ಮಾಡಬೇಕೆಂದು ತಿಳಿಸಿದರು.
ವಿವಿಧ ಕಲಾತಂಡಗಳು, ಕೃಷಿ, ತೋಟಗಾರಿಕೆ, ಮಹಿಳಾ ಹಾಗೂ ಇನ್ನಿತರ ಇಲಾಖೆಗಳ ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಯುವದಸರಾ
ಯುವ ದಸರಾದಲ್ಲಿ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿದ್ಯಾರ್ಥಿಗಳ ತಂಡಗಳನ್ನು ಆಯ್ಕೆ ಮಾಡಿ ಅವರಿಗೆ ಅವಕಾಶ ನೀಡಿದರೆ ಜಿಲ್ಲೆಯ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬಹುದು. ಕಾರ್ಯಕ್ರಮವು ವಿವಿಧ ನೃತ್ಯ ವೈಖರಿಗಳಿಂದ ಕೂಡಿರಲಿ ಎಂದರು.
ಕ್ರೀಡಾ ದಸರಾ
ಕ್ರೀಡಾ ದಸರಾದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಿಂದ ಕರಿಘಟ್ಟದವರೆಗೆ ಮ್ಯಾರಥಾನ್, ಕರಿಘಟ್ಟ ಬೆಟ್ಟಕ್ಕೆ ಚಾರಣ, ಕೆಸರುಗದ್ದೆಯಲ್ಲಿ ಓಡುವ ಸ್ಪರ್ಧೆ, ಹಗ್ಗ-ಜಗ್ಗಾಟ, ಕುಸ್ತಿ, ಖೋ-ಖೋ, ವಾಲಿಬಾಲ್, ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ. ಶಾಲಾ-ಕಾಲೇಜುಗಳಿಗೆ ಮಾಹಿತಿ ನೀಡಿ, ನೊಂದಣಿ ಮಾಡಿಕೊಂಡು ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡಿ ರಂದು ನಿರ್ದೇಶನ ನೀಡಿದರು.
ಯೋಗ ದಸರಾ
ಯೋಗ ಗುಚ್ಛ, ಸರಳ ಯೋಗಾಸನಗಳು, ಯೋಗ ನೃತ್ಯ ರೂಪಕ, ಯೋಗ ನಡಿಗೆ ಸೇರಿದಂತೆ ಕಾರ್ಯಕ್ರಮ ಆಯೋಜಿಸಲು ತರಬೇತಿ ನೀಡುವಂತೆ ತಿಳಿಸಿದರು.
ಈ ಬಾರಿ ಹೊಸದಾಗಿ ಆಹಾರ ಮೇಳ ಆಯೋಜಿಸಬೇಕು. ಇದಕ್ಕಾಗಿ ಉತ್ತಮವಾಗಿ ಆಹಾರ ತಯಾರಕರು, ಚಾಟ್ ಸ್ಟಾಲ್ ಗಳನ್ನು ಆಯೋಜನೆ ಮಾಡಿ ಎಂದರು.
ರೈತ, ಮಹಿಳಾ, ಉದ್ಯೋಗ ಮೇಳದ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಸ್ಥಳದಲ್ಲಿ ಸ್ವಚ್ಛತೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯದ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ಜಿ.ಪಂ.ಉಪಕಾರ್ಯದರ್ಶಿ ಸರಸ್ವತಿ, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಆರ್.ಐಶ್ವರ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.