ನಟ ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸುರತ್ಕಲ್-2 ಚಿತ್ರಕ್ಕೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಏ.26ರಂದು ವಿಜಯಯಾತ್ರೆ ಆಯೋಜಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಅನುಪ್ಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆ, ಐಪಿಎಲ್ ನಡೆಯುತ್ತಿರುವುದರಿಂದ ಸ್ವಲ್ಪ ಆತಂಕವಿತ್ತು. ಆದರೂ ರಾಜ್ಯದ ಜನರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಮೊದಲ ವಾರ 131 ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಎರಡನೇ ವಾರದಲ್ಲಿ 10ಕ್ಕೂ ಹೆಚ್ಚು ಚಿತ್ರಮಂದಿರ ಹೆಚ್ಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಸಂಭ್ರಮಾಚರಣೆ ಮಾಡಲಾಗುತ್ತಿದೆ. ಅಂದು ಬೆಳಗ್ಗೆ 10.30ಕ್ಕೆ ರಾಮನಗರ, ಮಧ್ಯಾಹ್ನ 1.30ಕ್ಕೆ ಮಂಡ್ಯದಲ್ಲಿ ಹಾಗೂ ಬಳಿಕ ಮೈಸೂರಿನಲ್ಲಿ ಯಾತ್ರೆ ನಡೆಯಲಿದೆ. ಈ ವೇಳೆ ಚಿತ್ರದ ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಇಡೀ ಕುಟುಂಬ ಸಹಿತ ನೋಡುವಂತಹ ಚಿತ್ರ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ತಂತ್ರಜ್ಞರನ್ನೇ ಬಳಸಿಕೊಳ್ಳಲಾಗಿದೆ. ಶಿವಾಜಿ ಸುರತ್ಕಲ್-1 ಅನ್ನು ಮೆಚ್ಚಿದಂತೆ ಎರಡನೇ ಭಾಗವನ್ನು ಜನರು ಮೆಚ್ಚಿಕೊಂಡಿದ್ದಾರೆ. ಚಿತ್ರದ ಸನ್ನಿವೇಶಗಳನ್ನು ಪ್ರೇಕ್ಷಕರನ್ನು ಸೆಳೆಯುತ್ತಿದೆ. ಚಿತ್ರರಂಗವನ್ನು ನಂಬಿಕೊಂಡು ಲಕ್ಷಾಂತರ ಕುಟುಂಬ ಬದುಕು ಕಟ್ಟಿಕೊಂಡಿವೆ. ಆದ್ದರಿಂದ ಜನರು ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನೇಗಿಲಯೋಗಿ ಸೇವಾ ಟ್ರಸ್ಟ್ನ ಅಧ್ಯಕ್ಷ ರಮೇಶ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಉದ್ಯಮಿ ಸೋಮಶೇಖರ್ ಇದ್ದರು.