ಮಂಡ್ಯದ ಶ್ರೀ ಕೃಷ್ಣ ಮಂಡಳಿಯ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ಕೃಷ್ಣನ ಚಿತ್ರ ಬರೆಯುವ ಸ್ಪರ್ಧೆ, ಕೃಷ್ಣನ ಕುರಿತು ಗಾಯನ ಸ್ಪರ್ಧೆಗಳನ್ನು ನಡೆಸಲಾಯಿತು
ನೂರಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಭಾಗವಹಿಸಿ ಬಹುಮಾನ ಪಡೆದರು. ಮಂಡ್ಯನಗರದ ವ್ಯಾಸರಾಜ ಮಠದ ಆವರಣದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು
ಶ್ರೀ ಕೃಷ್ಣ ಮಂಡಳಿಯ ಅಧ್ಯಕ್ಷೆ ಭಾರತಿ ಶ್ರೀಧರ್ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಕೃಷ್ಣ ಮಂಡಳಿಯು ಸೇವಾ ಮನೋಭಾವದಿಂದ ಎಂಟು ವರ್ಷಗಳ ಹಿಂದೆ ಬ್ರಾಹ್ಮಣ ಸಭಾ ಅಧ್ಯಕ್ಷ ಸದಾಶಿವ್ ಭಟ್ ಸಾರಥ್ಯದಲ್ಲಿ ಪ್ರಾರಂಭಗೊಂಡಿತು.
ಸಮಾನ ಮನಸ್ಕರಾದ 25 ಜನ ಉತ್ಸಾಹ ಭರಿತ ನಿರ್ದೇಶಕರನ್ನು ಹೊಂದಿದೆ. ದಕ್ಷಿಣ ಕನ್ನಡದ ಪ್ರಾಚೀನ ಕಲೆಯಾದ ಯಕ್ಷಗಾನ ತರಬೇತಿ ನೀಡಿ, ಕಲಿತ ನಂತರ ಪ್ರಸಂಗಗಳನ್ನು ನಡೆಸುತ್ತದೆ.
ಯಾವುದೇ ಸಾಮಾಜಿಕ ಧಾರ್ಮಿಕ ಕಾರ್ಯಗಳಾಗಲಿ, ಯಾವುದೇ ಸಮಾಜ ಮುಖಿ ಕಾರ್ಯಗಳಾದರೂ ಹೋಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುವ ಧ್ಯೇಯ ಈ ಮಂಡಳಿಯದ್ದಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪ್ರೇಮ ಹಂದೆ ಹಾಗೂ ಲೀಲಾ ಸದಾಶಿವ ಭಟ್ ಉಪಸ್ಥಿತರಿದ್ದರು.