ಮಳವಳ್ಳಿ ಪಟ್ಟಣದಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆ ಅಂಗವಾಗಿ ಪುರಸಭೆ ವತಿಯಿಂದ ಸ್ವಚ್ಛತೆ ಬಗ್ಗೆ ಬೀದಿ ನಾಟಕಗಳನ್ನು ವಿವಿಧೆಡೆ ಪ್ರದರ್ಶಿಸಲಾಯಿತು.
ಮಳವಳ್ಳಿ ಪಟ್ಟಣದ ಅನಂತ್ ರಾಂ ವೃತ್ತ, ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಸಿ.ಡಿ.ಡಿ.ಇಂಡಿಯಾ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಿದ ಬೀದಿ ನಾಟಕ ಪ್ರದರ್ಶನ ಹಾಗೂ ಮಾದರಿ ನಗರವಾಗುವ ಕಡೆಗೆ ಮಳವಳ್ಳಿ ಪಟ್ಟಣದ ನಡೆಗೆ ಕಾರ್ಯಕ್ರಮಕ್ಕೆ ಪುರಸಭೆ ಪರಿಸರ ಅಭಿಯಂತರ ನಾಗೇಂದ್ರ ಚಾಲನೆ ನೀಡಿ ಮಾತನಾಡಿ, ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡುವುದರ ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನಮ್ಮ ಆರೋಗ್ಯ ರಕ್ಷಣೆಗೆ ನಾವೇ ಮುಂದಾಗಬೇಕು. ಅಲ್ಲದೇ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ನಮ್ಮ ಸುತ್ತಮುತ್ತಲಿನ ವಾತಾವರಣ ಉತ್ತಮವಾಗಿದ್ದರೆ ನಮ್ಮ ಆರೋಗ್ಯವೂ ಚೆನ್ನಾಗಿರುತ್ತದೆ. ಸ್ವಚ್ಛತೆಯು ನಮ್ಮ ಮನೆಯಿಂದಲೇ ಆರಂಭಗೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವಚ್ಛತೆಯ ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಬೀದಿ ನಾಟಕಗಳು ಸಾರ್ವಜನಿಕರಲ್ಲಿ ಸಾಕಷ್ಟು ಅರಿವು ಮೂಡಿಸುತ್ತದೆ ಎಂದರು.
ಸಿ.ಡಿ.ಡಿ.ಇಂಡಿಯಾ ಸಂಸ್ಥೆಯ ಯೋಜನಾಧಿಕಾರಿ ರೋಹಿಣಿ ಪ್ರದೀಪ್ ಮಾತನಾಡಿ, ಸರ್ಕಾರದ ಸಹಯೋಗದೊಂದಿಗೆ ನಮ್ಮ ಸಂಸ್ಥೆಯು ರಾಜ್ಯದಲ್ಲಿ ಮಳವಳ್ಳಿ, ನೆಲಮಂಗಲ, ಮೂಡಬಿದರೆ ಪುರಸಭೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಸ್ವಚ್ಛತೆಗೆ ಹಾಗೂ ತ್ಯಾಜ್ಯ ನಿರ್ವಹಣೆ ಬಗ್ಗೆ ಸದಸ್ಯರು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಂಥ ಕಾರ್ಯಕ್ರಮಗಳಿಗೆ ಎಸ್ ಬಿ ಐ ಬ್ಯಾಂಕ್ ನೆರವು ನೀಡಲಿದೆ ಎಂದು ಹೇಳಿದರು.
ಸದಸ್ಯರಾದ ಎಂ.ಟಿ.ಪ್ರಶಾಂತ್, ಎಂ.ಎನ್.ಶಿವಸ್ವಾಮಿ, ಪುಟ್ಟಸ್ವಾಮಿ, ಟಿ.ನಂದಕುಮಾರ್, ರವಿ, ಸಿದ್ದರಾಜು, ಬಸವರಾಜು, ನೂರುಲ್ಲಾ, ಮಾಜಿ ಅಧ್ಯಕ್ಷ ದೊಡ್ಡಯ್ಯ, ಭೈರಪ್ಪ, ನಟರಾಜ್, ಅಂಕರಾಜು, ಕೃಷ್ಣ ಇದ್ದರು.