Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸುಮಲತಾ ಅಂಬರೀಶ್ ನಿರ್ಧಾರ ಏ.3ರಂದು ಪ್ರಕಟ

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದ ಸಂಸದೆ ಸುಮಲತಾ ಅಂಬರೀಶ್ ತಮ್ಮ ಮುಂದಿನ ನಿಲುವಿನ ಬಗ್ಗೆ ಗುಟ್ಟು ಬಿಟ್ಟುಕೊಡದೆ ಏ.3 ರಂದು ಮಂಡ್ಯದಲ್ಲಿ ಘೋಷಣೆ ಮಾಡುವುದಾಗಿ ತಿಳಿಸಿದರು.

ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸ ಮಂಡ್ಯ ಜಿಲ್ಲೆಯಿಂದ ಆಗಮಿಸಿದ್ದ ಅಪಾರ ಅಭಿಮಾನಿಗಳ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅವರು, ಮೊನ್ನೆಯವರೆಗೂ ಬಿಜೆಪಿ ಟಿಕೆಟ್ ಸಿಗುವ ವಿಶ್ವಾಸವಿತ್ತು, ಆದರೆ ಮೈತ್ರಿ ಪಕ್ಷಕ್ಕೆ ಕ್ಷೇತ್ರ ಬಿಟ್ಟುಕೊಡಲಾಗಿದೆ, ಬಿಜೆಪಿ ಹೈಕಮಾಂಡ್ ನನ್ನ ಮೇಲೆ ವಿಶ್ವಾಸವಿರಿಸಿ ಸಾಕಷ್ಟು ಪ್ರಯತ್ನ ಮಾಡಿತು ಆದರೆ ಫಲ ಸಿಗಲಿಲ್ಲ ಎಂದರು.

ನಾನು ಎಂದಿಗೂ ಸ್ವಾರ್ಥ ರಾಜಕಾರಣ ಮಾಡಿಲ್ಲ, ತಪ್ಪು ಹೆಜ್ಜೆ ಇರಿಸಿಲ್ಲ, ಮಂಡ್ಯ ಎಂದರೆ ನನಗೆ ಅಭಿಮಾನ, ನಿಮ್ಮನ್ನು ಬಿಟ್ಟು ನಿರ್ಧಾರ ಮಾಡುವುದಿಲ್ಲ. ಅದೇ ರೀತಿ ನಿಮ್ಮನ್ನು ನೋಯಿಸುವ ನಿರ್ಧಾರ ಕೂಡ ಮಾಡಲ್ಲ, ಮಂಡ್ಯದ ಜನತೆ ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದೀರಿ, ನಾನು ಯಾವುದೇ ಕಾರಣಕ್ಕೂ ಮಂಡ್ಯ ಬಿಡಲ್ಲ ಎಂದು ಹೇಳಿದರು.

ಅಂಬರೀಶ್ ಜೊತೆಗೆ ಇದ್ದವರು ಇವತ್ತು ನನ್ನೊಂದಿಗೆ ಇದ್ದೀರಿ, ನಿಮ್ಮನ್ನು ವಿಶ್ವಾಸಕ್ಕೆ ಪಡೆಯದೆ ನಾನು ಯಾವುದೇ ನಿರ್ಧಾರ ಮಾಡುವುದಿಲ್ಲ, ನಿಮ್ಮನ್ನು ಕೇಳಿಯೇ ನಾನು ಎಲ್ಲಾ ನಿರ್ಧಾರ ಮಾಡುತ್ತೇನೆ, ಮಂಡ್ಯ ಜಿಲ್ಲೆಯಲ್ಲಿ ಮತ್ತಷ್ಟು ಲಕ್ಷಾಂತರ ಜನತೆ ನನ್ನೊಂದಿಗೆ ಇದ್ದಾರೆ, ಎಲ್ಲರ ಜೊತೆ ಚರ್ಚಿಸಿ ಮುನ್ನಡೆಯ ಬೇಕಾಗಿದೆ ಹಾಗಾಗಿ ಕಾಲಾವಕಾಶ ಬೇಕಾಗಿದ್ದು, ಏಪ್ರಿಲ್ 3 ರಂದು ಮಂಡ್ಯದಲ್ಲಿ ಎಲ್ಲರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಘೋಷಿಸಿದರು.

ನನ್ನ ಭವಿಷ್ಯಕ್ಕಿಂತ ಹೆಚ್ಚಾಗಿ ನನ್ನನ್ನು ನಂಬಿರುವ ಜನರ ಭವಿಷ್ಯ ನನಗೆ ಮುಖ್ಯ, ಇದೇ ವಿಚಾರವನ್ನು ಬಿಜೆಪಿ ವರಿಷ್ಠರ ಬಳಿ ಹೇಳಿದ್ದೇನೆ, ನನ್ನನ್ನು ನಂಬಿರುವ ಜನತೆಯ ಜವಾಬ್ದಾರಿ ನನ್ನ ಮೇಲಿದೆ, ಅವರಿಗೂ ಸೂಕ್ತ ಸ್ಥಾನಮಾನ ಸಲ್ಲಬೇಕಾಗಿದೆ, ಬಿಜೆಪಿ ವರಿಷ್ಠರು ಹಾಗೂ ರಾಜ್ಯದ್ಯಕ್ಷರು ಪಕ್ಷಕ್ಕೆ ಸಹಕಾರ ನೀಡಿ, ಉಜ್ವಲ ಭವಿಷ್ಯ ನಿಮ್ಮದಾಗಲಿದ್ದು, ಉನ್ನತ ಸ್ಥಾನಮಾನದ ಭರವಸೆ ನೀಡಿದ್ದಾರೆ ಆದರೆ ನಾನು ನನ್ನ ನಂಬಿರುವ ಜನತೆಯನ್ನು ಕೈ ಬಿಡುವ ಪ್ರಶ್ನೆ ಇಲ್ಲ, ಆ ಪಕ್ಷ ಈ ಪಕ್ಷಕ್ಕೆ ಒಳ್ಳೆಯದಾಗಲಿ ಎಂಬ ನಿಲುವಿನ ಮೇಲೆ ನಿರ್ಧಾರ ಮಾಡಲ್ಲ, ನನ್ನ ನಂಬಿರುವ ಜನರ ಭವಿಷ್ಯದ ಮೇಲೆ ನನ್ನ ನಿಲುವು ಇರಲಿದೆ, ಮಂಡ್ಯದ ಋಣ ನನ್ನ ಮೇಲಿದೆ ಎಂದು ಹೇಳಿದರು.

ಮಂಡ್ಯ ಜಿಲ್ಲಾ ಜನರು ನನ್ನ ಮೇಲೆ ಅಭಿಮಾನ ಇಟ್ಟು ಇಲ್ಲಿಗೆ ಬಂದಿದ್ದಾರೆ, ಈಗಿನ ಬೆಳವಣಿಗೆಯನ್ನುಬಿಜೆಪಿ ವರಿಷ್ಟರಿಗೆ ತಿಳಿಸಲಾಗುವುದು, ನಿಮ್ಮನ್ನು ಬಿಟ್ಟು ಯಾವುದೇ ನಿರ್ಧಾರ ಮಾಡುವುದಿಲ್ಲ ಎಂದರು.
ಅಂಬರೀಷ್ ಮನೆಗೆ ಯಾರೇ ಬಂದರೂ ಅದಕ್ಕೆ ಸ್ವಾಗತ ಇದೆ, ಆಕ್ಷೇಪ ಇರುವುದಿಲ್ಲ, ಎಲ್ಲಿಗೆ ಬಂದು ನನ್ನೊಂದಿಗೆ ಮಾತುಕತೆ ಮಾಡಲು ಎಲ್ಲರಿಗೂ ಕೂಡ ಮುಕ್ತ ಅವಕಾಶವಿದೆ ಎಂದು ತಿಳಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!