ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರದ ವಿರುದ್ಧ ಹೋರಾಟ ಮುಂದುವರೆದಿದ್ದು, ಸೋಮವಾರ ಮಂಡ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ನೇತೃತ್ವದ ಹೋರಾಟದಲ್ಲಿ ಇಂಡುವಾಳು ಗ್ರಾಮದ ಮಹಿಳಾ ಸ್ವಸಹಾಯ ಸಂಘದ ಸದ್ಯಸರು, ಕನ್ನಡ ಸೇನೆ ಹಾಗೂ ರೈತ ಸಂಘದ ಕಾರ್ಯಕರ್ತರು ಭಾಗಿಯಾದರು.
ಬೆಂಗಳೂರು -ಮೈಸೂರು ಹೆದ್ದಾರಿಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ -ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡದೇ ಬೇಜವಾಬ್ದಾರಿ ಪ್ರದರ್ಶಿಸಲಾಗುತ್ತಿದೆ, ಕೇಂದ್ರ ಸರ್ಕಾರ ಕರುನಾಡಿನ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ, ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಹಾಗೂ ಪ್ರಾಧಿಕಾರ ತಾರತಮ್ಯ ನೀತಿ ಅನುಸರಿಸಿ ತಮಿಳುನಾಡಿನ ಹಿತ ಕಾಪಾಡಲು ಮುಂದಾಗಿವೆ ಎಂದು ಕಿಡಿಕಾರಿದರು.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸುನಂದ ಜಯರಾಂ, ಕೆ.ಬೋರಯ್ಯ, ರೈತ ಸಂಘದ ಇಂಡು ವಾಳು ಚಂದ್ರಶೇಖರ್. ಕೀಳಘಟ್ಟ ಪುಟ್ಟಸ್ವಾಮಿ,ನಾರಾಯಣ್, ಬಿಜೆಪಿ ಮುಖಂಡ ಇಂಡುವಾಳು
ಸಚ್ಚಿದಾನಂದ, ದಸಂಸ ಎಂ ವಿ ಕೃಷ್ಣ ನೇತೃತ್ವ ವಹಿಸಿದ್ದರು. ಇಂಡುವಾಳು ಮಹಿಳಾ ಸ್ವ ಸಹಾಯ ಸಂಘದ ಸುಧಾ ಚಂದ್ರಶೇಖರ್, ಶೃತಿ ಸಿದ್ದಪ್ಪ, ಶೀಲಾ, ಮಂಜುಳಾ ಬಸವರಾಜ್, ಶೈಲಜಾ, ವಸಂತ ಕುಮಾರಿ, ಭಾಗ್ಯಮ್ಮ, ದೇವಮ್ಮ,ಜಯಮ್ಮ ನೇತೃತ್ವ ವಹಿಸಿದ್ದರು. ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಹೆಚ್.ಸಿ.ಮಂಜುನಾಥ್, ಎಂ.ಎಸ್.ಮಂಜುನಾಥ್, ಮಹಾಂತಪ್ಪ, ರವಿ. ಶಿವರಾಮ ಭಾಗವಹಿಸಿದ್ದರು.