ವರದಿ : ಪ್ರಭು ವಿ.ಎಸ್.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಿದ್ದು ಪ್ರಸಕ್ತ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿರುವುದಾಗಿ ಕಾಂಗ್ರೆಸ್ ಮುಖಂಡ, ಉದ್ಯಮಿ ಕದಲೂರು ಉದಯ್ ವಿಶ್ವಾಸ ವ್ಯಕ್ತಪಡಿಸಿದರು.
ಮದ್ದೂರು ತಾಲೂಕಿನ ಆತಗೂರು ಹೋಬಳಿ ವ್ಯಾಪ್ತಿಯ ತೊರೆಶೆಟ್ಟಹಳ್ಳಿ ಗ್ರಾ.ಪಂ.ನ ವಿವಿಧ ಗ್ರಾಮಗಳ ಇತರೆ ಪಕ್ಷದ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಬಳಿಕ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದು ಎಲ್ಲೆಡೆ ಉತ್ತಮ ವಾತಾವರಣ ನಿರ್ಮಾಣಗೊಂಡಿರುವುದಾಗಿ ಹೇಳಿದರು.
ಕಾಂಗ್ರೆಸ್ ಪಕ್ಷವು ಎಲ್ಲಾ ವರ್ಗಗಳ ಅಭ್ಯುದಯಕ್ಕೆ ನಿರಂತರವಾಗಿ ಶ್ರಮಿಸುತ್ತಿದ್ದು ಈಗಾಗಲೇ ಐದು ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸುವ ಜತೆಗೆ ಅಧಿಕಾರಕ್ಕೆ ಬಂದ ದಿನದಿಂದಲೇ 20 ಯುನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಗೃಹಿಣಿಗೆ 2 ಸಾವಿರ, 10 ಕೆ.ಜಿ. ಅಕ್ಕಿ, ಪದವೀಧರರಿಗೆ 3 ಸಾವಿರ ಉದ್ಯೋಗ ಭತ್ಯೆ, ಸ್ತ್ರೀಶಕ್ತಿ ಸಾಲ ಮನ್ನಾ ಇನ್ನಿತರೆ ಯೋಜನೆಗಳನ್ನು ಘೋಷಿಸಿರುವುದಾಗಿ ಹೇಳಿದರು.
ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಳೆದ ಹಲವಾರು ವರ್ಷಗಳಿಂದಲೂ ಅಧಿಕಾರದಿಂದ ವಂಚಿತವಾಗಿದ್ದು ಈ ಭಾರಿ ನಡೆಯುವ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಅಧಿಕಾರಕ್ಕೆ ತರಲು ಈಗಿನಿಂದಲೇ ಕಾರ್ಯಯೋಜನೆ ರೂಪಿಸಬೇಕೆಂದರು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ :
ಕಳೆದ ಹಲವಾರು ವರ್ಷಗಳಿಂದಲೂ ಜೆಡಿಎಸ್ ಪಕ್ಷದಲ್ಲಿದ್ದ ಸ್ಥಳೀಯ ಮುಖಂಡರಾದ ರವಿ, ಬೊಮ್ಮೇಗೌಡ, ಶಶಿ, ಶೇಖರ್, ಶಂಕರ್, ಶಿವಲಿಂಗಯ್ಯ, ಪುಟ್ಟಲಿಂಗಯ್ಯ, ಕೃಷ್ಣ, ರಾಮೇಗೌಡ, ಶಿವು, ಶಿವಲಿಂಗ ಇತರರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ವೇಳೆ ಸ್ಥಳೀಯ ಮುಖಂಡರಾದ ಶಿವು. ಯತೀಶ್, ಮಧುಕುಮಾರ್ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.