ಮಂಡ್ಯ ಜಿಲ್ಲೆಯಲ್ಲಿ ನೊಂದಣಿಯಾಗಿರುವ 13 ರಿಗ್ ಮಾಲೀಕರು ಕುಡಿಯುವ ನೀರಿಗೆ ಸಂಬಂಧಿಸಿದ ಬೋರ್ ವೆಲ್ ಕೊರೆಯಲು ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಿಗ್ ಮಾಲೀಕರ ಸಭೆ ನಡೆಸಿ ಅವರು ಮಾತನಾಡಿದರು.
ಮಂಡ್ಯ ಜಿಲ್ಲೆಯಲ್ಲಿ 7 ತಾಲ್ಲೂಕುಗಳು ಬರ ಪೀಡಿತವಾಗಿದ್ದು, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಬೋರ್ ವೆಲ್ ರಿಫ್ಲಶಿಂಗ್ ಮತ್ತು ರಿಡ್ರಿಲಿಂಗ್ ಗಳ ಕೆಲಸಗಳನ್ನು ಮೊದಲು ಮಾಡಬೇಕು ಎಂದರು.
ಜಿಲ್ಲೆಯಲ್ಲಿ ನೊಂದಾಯಿತ ರಿಗ್ ಮಾಲೀಕರು ಮಾತ್ರ ಬೋರ್ ವೆಲ್ ಕೊರೆಯುವ ಕೆಲಸ ಮಾಡಬೇಕು. ಅದನ್ನು ಹೊರತುಪಡಿಸಿ ಬೇರೆಯವರು, ಹೊರ ಜಿಲ್ಲೆ ಹಾಗೂ ರಾಜ್ಯದವರು ಬೋರ್ ವೆಲ್ ಕೊರೆಯುತ್ತಿರುವುದು ಹಾಗೂ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸುತ್ತಿರುವ ಬಗ್ಗೆ ಜಿಲ್ಲೆಯಲ್ಲಿ ದೂರು ಕೇಳಿಬರುತ್ತಿದೆ ಎಂದರು.
ಕಂಟ್ರೋಲ್ ರೂಂ ನೊಂದಾಯಿತ ರಿಗ್ ಮಾಲೀಕರು ಹೊರತುಪಡಿಸಿ ಬೇರೆಯವರು ಅನಧಿಕೃತವಾಗಿ ಬೋರ್ ವೆಲ್ ಕೊರೆಯುವುದು ಕಂಡುಬಂದಲ್ಲಿ ಅಥವಾ ನಿಗಧಿ ಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಬೋರ್ ವೆಲ್ ಕೊರೆಯಲು ಪಡೆಯುತ್ತಿದ್ದಲ್ಲಿ ದೂರು ಸಲ್ಲಿಸಲು ಕಂಟ್ರೋಲ್ ರೂಂ ಸ್ಥಾಪಿತವಾಗಿದ್ದು, ಸಾರ್ವಜನಿಕರು ದೂರವಾಣಿ ಸಂಖ್ಯೆ 08232-220704 ಹಾಗೂ 08232-200704 ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ ಎಂದರು.
ರಿಗ್ ಮಾಲೀಕರು ಅವರು ಬೋರ್ ವೆಲ್ ಕೊರೆಯುವ ಮೊದಲು ಸ್ಥಳೀಯ ಸಂಸ್ಥೆಗಳಿಂದ ಎನ್.ಒ.ಸಿ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು. ವಿಫಲವಾದ ಬೋರ್ ವೆಲ್ ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಬೇಕು ಎಂದರು.
ದರದ ವಿವರ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಕೊಳವೆಬಾವಿ ಕೊರೆಯಲು ನಿಗದಿಪಡಿಸಿರುವ ದರದ ವಿವರ ಇಂತಿದೆ.
165 ಮಿ.ಮೀ ವ್ಯಾಸದ ಬೋರ್ ವೆಲ್ ಕೊರೆಯಲು 0 ಯಿಂದ 300 ಅಡಿ ಪ್ರತಿ ಅಡಿಗೆ ರೂ 126/-, 300 ರಿಂದ 400 ಅಡಿಗೆ ರೂ 148/-, 400 ರಿಂದ 500 ಅಡಿಗೆ ರೂ 153/-, 500 ರಿಂದ 600 ಅಡಿಗೆ ರೂ 175/-, 600 ರಿಂದ 700 ಅಡಿಗೆ ರೂ 188/- ಹಾಗೂ 700 ರಿಂದ 800 ಅಡಿಗೆ ರೂ 205/- ನಿಗದಿಯಾಗಿರುತ್ತದೆ.
ಎಂ.ಎಸ್. ಕೇಸಿಂಗ್ ಪೈಪ್ ಗೆ 1.60 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ ರೂ 420/-, 1.80 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ ರೂ 450/- ಹಾಗೂ ,2.00 ಮಿ.ಮೀಟರ್ ದಪ್ಪದ ಪ್ರತಿ ಅಡಿಗೆ ರೂ 480/- ನಿಗದಿಯಾಗಿರುತ್ತದೆ. ಎಂ.ಎಸ್.ಕೇಸಿಂಗ್ ಕ್ಯಾಪ್ ಒಂದಕ್ಕೆ ರೂ 164/-ನಿಗದಿಯಾಗಿರುತ್ತದೆ ಎಂದು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯಪಾಲಕ ಅಭಿಯಂತರ ಶಿವರಾಜು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಹಿರಿಯ ಭೂ ವಿಜ್ಞಾನಿ ರಾಜಶ್ರೀ ಎಸ್ ಎರ್, ಜಿಲ್ಲಾ ವಾರ್ತಾಧಿಕಾರಿ ಎಸ್ ಎಚ್ ನಿರ್ಮಲ ಹಾಗೂ ರಿಗ್ ಮಾಲೀಕರು ಉಪಸ್ಥಿತರಿದ್ದರು.