ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಶಿವರಾಮೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್ ಕಾರ್ಯಕರ್ತರು ನಾಗಮಂಗಲದಲ್ಲಿ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.
ಡಿಸಿಎಂ ಡಿಕೆಶಿ ಹಾಗೂ ಶಿವರಾಮೇಗೌಡ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಪ್ರೆನ್ ಡ್ರೈವ್ ಹಂಚಿಕೆ ಮಾಡಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಪ್ರಜ್ವಲ್ ತಪ್ಪು ಮಾಡಿದರೆ ಶಿಕ್ಷೆಗೆ ತಕ್ಕ ಶಿಕ್ಷೆಯಾಗಲಿ, ಆದರೆ ಅಮಾಯಕ ಹೆಣ್ಣು ಮಕ್ಕಳ ವಿಡಿಯೋಗಳನ್ನು ಬಿಡುಗಡೆ ಮಾಡಿ ಮಹಾ ಅಪರಾಧ ಮಾಡಿದ ಅವರಿಗೆ ಶಿಕ್ಷೆಯಾಗಲಿ ಎಂದು ಒತ್ತಾಯಿಸಿದರು.
ದೇವೇಗೌಡರ ಕುಟುಂಬದ ಮಾನ ಮರ್ಯಾದೆಯನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲು ಕಾಂಗ್ರೆಸ್ ಹುನ್ನಾರ ನಡೆಸಿದೆ, ಪೊಲೀಸರು, ಎಸ್ಐಟಿ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ಹೆಣ್ಣು ಮಕ್ಕಳ ಜೀವನ ಹಾಳಾಗಿದೆ, ಇದಕ್ಕೆ ಹೊಣೆ ಯಾರು ? ಎಸ್ಐಟಿ ತನಿಖೆಗೆ ಇದು ಸುರ್ಜೆವಾಲ ತನಿಖೆಯಾಗಿದೆ ಎಂದು ಕಿಡಿಕಾರಿದರು.
ಕಳೆದ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಹತ್ರ 5 ಕೋಟಿ ಹಣ ಪಡೆದು, ಎನ್.ಡಿ.ಎ ಪಕ್ಷ ಕೆಲಸ ಮಾಡುವುದಾಗಿ ನಾಟಕ ಮಾಡಿದ್ದು ಯಾರು ಎಂದು ಜನತೆಗೆ ಗೊತ್ತಿದೆ ಎಂದು ಶಿವರಾಮೇಗೌಡ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾಗಮಂಗಲ ತಾಲೂಕು ಕಚೇರಿ ಮುಂಭಾಗ ಡಿಕೆಶಿ ಪ್ರತಿಕೃತಿ ದಹನಕ್ಕೆ ಮುಂದಾದಾಗ, ಪ್ರತಿಕೃತಿ ದಹನಕ್ಕೆ ಅವಕಾಶ ಇಲ್ಲ ಎಂದು ಪೊಲೀಸರು ಹೊತ್ತೊಯ್ದರು, ಡಿಕೆಶಿ ಪ್ರತಿಕೃತಿ ಪೊಲೀಸರ ಕ್ರಮವನ್ನು ಖಂಡಿಸಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.