ಮೂರು ಹಂತದ ಲೋಕಸಭಾ ಚುನಾವಣೆಗಳು ನಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಕುರ್ಚಿ ಅಲುಗಾಡುತ್ತಿದ್ದು, ಇವರು ತಮ್ಮ ಸ್ನೇಹಿತರ ವಿರುದ್ಧವೇ ವಾಗ್ದಾಳಿ ಆರಂಭಿಸಿದ್ದಾರೆ. ಇವೆಲ್ಲವೂ ಫಲಿತಾಂಶದ ನಿಜವಾದ ದಿಕ್ಸೂಚಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಈ ಬಗ್ಗೆ ‘ಎಕ್ಸ್’ನಲ್ಲಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಕಾಲ ಬದಲಾಗುತ್ತದೆ. ಸ್ನೇಹಿತರು ಸ್ನೇಹಿತರಾಗಿರುವುದಿಲ್ಲ. ಮೂರು ಸುತ್ತಿನ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ನೇಹಿತರ ವಿರುದ್ಧವೇ ದಾಳಿ ಆರಂಭಿಸಿದ್ದಾರೆ.ಇದು ಮೋದಿಯವರ ಕುರ್ಚಿ ಅಲುಗಾಡುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಇದು ಫಲಿತಾಂಶದ ನಿಜವಾದ ದಿಕ್ಸೂಚಿಯನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಪ್ರಚಾರ ಕೈಗೊಂಡಿದ್ದ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸನ್ನು ಟೀಕಿಸುವ ಸಂದರ್ಭದಲ್ಲಿ ಅಂಬಾನಿ ಹಾಗೂ ಅದಾನಿ ವಿರುದ್ಧವು ವಾಗ್ದಳಿ ನಡೆಸಿದ್ದರು.
“ಚುನಾವಣೆ ಘೋಷಣೆಯಾದಗಿನಿಂದಲೂ ಕಾಂಗ್ರೆಸ್ ಅಂಬಾನಿ –ಅದಾನಿಯನ್ನು ತೆಗಳುವುದನ್ನು ಬಿಟ್ಟಿಲ್ಲ. ನಾನು ತೆಲಂಗಾಣ ಮಣ್ಣಿನ ಜನರನ್ನು ಕೇಳುತ್ತೇನೆ, ಅಂಬಾನಿ-ಅದಾನಿಯಿಂದ ಎಷ್ಟು ಪಡೆದುಕೊಂಡಿದ್ದಾರೆ ಎಂಬುದನ್ನು ಮಹಾರಾಜರು ಘೋಷಿಸಲಿ. ಟೆಂಪೋ ಲೋಡುಗಟ್ಟಲೆ ಹಣ ಕಾಂಗ್ರೆಸಿಗೆ ತಲುಪಿದೆಯಲ್ಲವೆ? ರಾತ್ರೋರಾತ್ರಿ ಒಳ ಒಪ್ಪಂದವಾದ ನಂತರ ಅದಾನಿ ವಿರುದ್ಧ ದಾಳಿ ಮಾಡುವುದನ್ನು ನಿಲ್ಲಿಸಿದ್ದಾರೆ” ಎಂದು ಪ್ರಧಾನಿ ಹೇಳಿದ್ದರು.
“ಖಂಡಿತಾ ಏನೋ ಅಕ್ರಮ ಒಳ ಒಪ್ಪಂದ ನಡೆದಿದೆ. ಐದು ವರ್ಷಗಳಲ್ಲಿ ಅದಾನಿ – ಅಂಬಾನಿಗಳನ್ನು ತೆಗಳುತ್ತಿದ್ದವರು ರಾತ್ರೋ ರಾತ್ರಿ ನಿಲ್ಲಿಸಿದ್ದಾರೆ. ಇದರ ಅರ್ಥ ನೀವು ಲೋಡುಗಟ್ಟಲೆ ಹಣವನ್ನು ಲೂಟಿ ಮಾಡಿದ್ದೀರಿ. ಇದಕ್ಕೆ ನೀವು ದೇಶಕ್ಕೆ ಉತ್ತರಿಸಬೇಕು” ಎಂದು ಪ್ರಧಾನಿ ಹೇಳಿದ್ದರು.