ವರದಿ : ಪ್ರಭು ವಿ.ಎಸ್. ಮದ್ದೂರು
ಸಾಲ ಮನ್ನಾ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸುಳ್ಳು ಹೇಳುವುದನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಳ್ಳೆಯ ತರಬೇತಿ ದಾರರನ್ನು ನೇಮಕ ಮಾಡಿಕೊಂಡಿರಬೇಕು ಅನಿಸುತ್ತದೆ. ನಾನು ಅಂತಹ ತರಬೇತಿ ದಾರರನ್ನು ಹುಡುಕುತ್ತಿದ್ದು, ಸಿಗುತ್ತಿಲ್ಲ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಾಗಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪದಲ್ಲಿ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದುದ್ದಕ್ಕೂ ಜನರ ಜೀವನ ಮಟ್ಟ ಕುಸಿದಿದೆ. ಬಿಜೆಪಿ ಸರ್ಕಾರದಲ್ಲಿ ವೈಫಲ್ಯ ಎದ್ದು ಕಾಣುತ್ತಿದೆ.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಸಮುದಾಯಕ್ಕೆ ಸೀಮಿತ ವಾಗಿಲ್ಲ. ಅವರು ಆಯ್ಕೆಯಾಗಿದ್ದು, ಇಡೀ ರಾಜ್ಯವೇ ಹೆಮ್ಮೆ ಪಡುವ ವಿಚಾರ.ಆಶ್ರಯ ಮನೆ ಕೊಡುವಲ್ಲಿ ಬಿಜೆಪಿ ಮೀನಾ ಮೇಷ ಎಣಿಸುತ್ತಿದೆ ಎಂದ ಅವರು, ಕೊಪ್ಪ ಭಾಗದಲ್ಲಿ ಕಂದಾಯ ಕಚೇರಿ ಮತ್ತು ಪ್ರವಾಸಿ ಮಂದಿರ ನಿರ್ಮಿಸುವ ಜೊತೆಗೆ ಕೊಪ್ಪ ಹೋಬಳಿ ತಾಲ್ಲೂಕು ಕೇಂದ್ರ ಮಾಡುವ ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿ ಗೌಡ ಮಾತನಾಡಿ,ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ಬರಬೇಕು. ಎಲ್ಲಾ ವರ್ಗದ ಮತಗಳನ್ನು ಕಸಿಯಲು ಬಿಜೆಪಿ ಹವಣಿಸುತ್ತಿದೆ. ಕಾರ್ಯಕರ್ತರು ಬಹಳ ಎಚ್ಚರಿಕೆಯಿಂದ ಒಂದಾಗಿ ಪರಿಸ್ಥಿತಿ ನಿಭಾಯಿಸಬೇಕು. ಕಾಂಗ್ರೆಸ್ 130 ಸ್ಥಾನ ಬರುತ್ತದೆ. ಜಿಲ್ಲೆಯಲ್ಲಿ ಏಳಕ್ಕೆ ಏಳು ಕಾಂಗ್ರೆಸ್ ಬರುತ್ತದೆ. ಎಲ್ಲಾ ಸಮೀಕ್ಷೆಯಲ್ಲಿ ಸಹ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಂಭವ ಹೆಚ್ಚು ಎಂದು ಹೇಳಿವೆ ಎಂದರು.
ಈ ಭಾಗದ ಸಕ್ಕರೆ ಕಾರ್ಖಾನೆ ಎಥೆನಾಲ್ ಘಟಕ ಸ್ಥಾಪಿಸದಿರುವುದು ಬೇಸರದ ಸಂಗತಿ.ಅದರಲ್ಲಿ ಬರುವ ಲಾಭದಲ್ಲಿ ರೈತರ ಕಲ್ಯಾಣಕ್ಕೆ ಬಳಸಬೇಕು ಎಂದು ಆಗ್ರಹಿಸಿದರು.
ಜೋಗೀ ಗೌಡರಿಗೆ ಅಭಿನಂದನೆ
ಡಿಸಿಸಿ ಬ್ಯಾಂಕ್ ನಿರ್ದೇಶಕ ಜೋಗಿಗೌಡ ಅವರನ್ನು ಚಲುವರಾಯಸ್ವಾಮಿ ಮತ್ತು ದಿನೇಶ್ ಗೂಳಿಗೌಡ ಅವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ದಿವಾಕರ್, ಗಟ್ಟಹಳ್ಳಿ ಹರೀಶ್, ಬಿ.ಎಂ. ರಘು,ಕೆ. ಜಿ. ಕೃಷ್ಣೇಗೌಡ, ಕುಮಾರ್ ಕೊಪ್ಪ, ರಮೇಶ್, ರವಿಕುಮಾರ್ ಹಾಗೂ ಕೊಪ್ಪ ಗ್ರಾಮಸ್ಥರು ಹಾಜರಿದ್ದರು.