ಜೂ.13ರಂದು ನಡೆಯಲಿರುವ ದಕ್ಷಿಣ ಪದ ವೀಧರ ಕ್ಷೇತ್ರದ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಸ್ಪರ್ಧಿಸಿರುವ ಮಧು ಜಿ.ಮಾದೇಗೌಡರನ್ನು ವಿಚಾರವಾದಿಗಳ ಒಕ್ಕೂಟ ಬೆಂಬಲಿಸಲಿದೆ ಎಂದು ಪ್ರೊ. ಜಿ.ಟಿ.ವೀರಪ್ಪ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ಮಾಜಿ ಸಂಸದ ಜಿ.ಮಾದೇಗೌಡರು ಭಾರತೀ ಎಜುಕೇಷನ್ ಟ್ರಸ್ಟ್ ತೆರೆದು ಸಾಕಷ್ಟು ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಸ್ಥಾನದಲ್ಲಿ ಇರುವಂತೆ ಮಾಡಿದ್ದಾರೆ. ಅಲ್ಲದೆ ರಾಜಕೀಯ ರಂಗದಲ್ಲೂ ಜಿ.ಮಾದೇಗೌಡರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇಂದು ತಂದೆಯ ಹಾದಿಯಲ್ಲಿ ನಡೆಯುತ್ತಿರುವ ಮಧು ಜಿ.ಮಾದೇಗೌಡರನ್ನು ಪ್ರತಿಯೊಬ್ಬ ಪ್ರಜ್ಞಾವಂತರು ಬೆಂಬಲಿಸಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಜನರಲ್ಲಿ ಆಧ್ಯಾತ್ಮಿಕತೆ, ಸಾಂಸ್ಕೃತಿಕ ಪರಂಪರೆಯನ್ನು ವೃದ್ಧಿಗೊಳಿಸಲು ಆತ್ಮಲಿಂಗೇಶ್ವರ ಪುಣ್ಯಕೇತ್ರವನ್ನು ನಾಡಿನ ಭೂಪಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬದುಕು ಮತ್ತು ಸಾಮಾಜಿಕ ತತ್ವ ಮುಂದಿನ ಜನಾಂಗಕ್ಕೆ ಅರಿವು ಮಾಡಿಕೊಡುವ ಕಾರಣದಿಂದ ಗಾಂಧಿ ಭವನಗಳ ಸ್ಥಾಪನೆಗೆ ಕಾರಣೀ ಪುರುಷರಾಗಿ ಮಾದೇಗೌಡರು ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಅನೇಕ ಕರಕುಶಲ ಮತ್ತು ಗುಡಿ ಕೈಗಾರಿಕೆಗಳ ತರಬೇತಿ ಪಡೆದು ಸಾವಿರಾರು ಮಂದಿ ಸ್ವಂತ ಉದ್ಯೋಗಿಗಳಾಗಿ ಸ್ವಾವಲಂಬಿ ಬದುಕು ನಿರ್ವಹಿಸಬೇಕೆಂದು ಆಲೋಚಿಸಿ ಗಾಂಧೀ ಗ್ರಾಮವನ್ನು ಪ್ರಾರಂಭ ಮಾಡಿದ್ದಾರೆ. ಅಂತಹ ಮಹಾನೀಯರ ಮಗ ಇಂದು ಚುನಾವಣೆಗೆ ಸ್ಪರ್ಧೆ ಮಾಡಿರುವುದರಿಂದ ಎಲ್ಲಾ ಪದವೀಧರ ಬಂಧುಗಳು ಮತ ನೀಡಬೇಕು ಎಂದು ಮನವಿ ಮಾಡಿದರು.
ಭಾರತೀ ಎಜುಕೇಷನ್ ಟ್ರಸ್ಟ್ ನಲ್ಲಿ ವ್ಯಾಸಂಗ ಮಾಡಿ ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಒಗ್ಗೂಡಿಸಿ ಈ ಒಕ್ಕೂಟವನ್ನು ಸ್ಥಾಪನೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲೂ ಟ್ರಸ್ಟಿಗಳಿದ್ದಾರೆ. ಮಧು ಜಿ.ಮಾದೇಗೌಡರ ಗೆಲುವು ನಿಶ್ಚಿತವಾಗಿದ್ದು, ಇದಕ್ಕೆ ಮತ್ತಷ್ಟು ಪುಷ್ಠಿ ನೀಡಬೇಕು ಎಂದು ಮನವಿ ಮಾಡಿದರು.
ನಿವೃತ್ತ ಪ್ರೊ.ಬೋರೇಗೌಡ, ಸುಂಡಹಳ್ಳಿ ಮಂಜುನಾಥ್, ಲಿಂಗಣ್ಣ ಬಂಧೂಕಾರ್, ಶಂಕರಗೌಡ ಉಪಸ್ಥಿತರಿದ್ದರು.