ಮಳವಳ್ಳಿ ಪಟ್ಟಣದ ಒಕ್ಕಲಿಗರ ಭವನ ನಿರ್ಮಾಣ ಕಾಮಗಾರಿ ಅಭಿವೃದ್ದಿಗೆ ಸ್ಪಂದಿಸಿದ ಶಾಸಕ ಡಾ.ಕೆ.ಅನ್ನ ದಾನಿ ಅವರು ವೈಯಕ್ತಿಕವಾಗಿ ಧನ ಸಹಾಯ ಮಾಡಿ ಕಾಮಗಾರಿ ಅಂತಿಮಗೊಳಿಸುವಂತೆ ಸಲಹೆ ನೀಡಿದರು.
ಮಳವಳ್ಳಿ ಪಟ್ಟಣದ ತಾಲ್ಲೂಕು ಒಕ್ಕಲಿಗರ ಸಂಘದ ಕಚೇರಿಯಲ್ಲಿ ಧನ ಸಹಾಯ ನೀಡಿದ ಬಳಿಕ ಸಂಘದಿಂದ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಒಕ್ಕಲಿಗರ ಭವನ ನಿರ್ಮಾಣ ಕಾಮಗಾರಿ ಅಂತಿಮಗೊಳಿಸಲು ಪ್ರತಿಯೊಬ್ಬರು ಶ್ರಮಿಸಬೇಕಿದೆ, ಸಮುದಾಯದ ಮುಖಂಡರು ದಾನಿಗಳಿಂದ ಹಣ ಸಂಗ್ರಹಿಸಿ ಕಾಮಗಾರಿ ಅಂತಿಮಗೊಳಿಸಲು ಶ್ರಮಿಸಬೇಕೆಂದರು.
ಮಳವಳ್ಳಿ ತಾಲ್ಲೂಕಿನಲ್ಲಿ ಬಸವ ಭವನ, ಕನಕ ಭವನ, ಜಗಜೀವನ್ ರಾಂ ಭವನ, ವಿಶ್ವಕರ್ಮ ಭವನ
ಸೇರಿದಂತೆ ಎಲ್ಲ ಸಮುದಾಯಗಳ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಒಕ್ಕಲಿಗರ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದು, ಹೆಚ್ಚುವರಿ ಅನುದಾನ ನೀಡಲು ಸಾಧ್ಯವಾಗದ ಹಿನ್ನಲೆಯಲ್ಲಿ ವೈಯಕ್ತಿಕವಾಗಿ ಧನ ಸಹಾಯ ನೀಡಲಾಗಿದೆ, ಮುಂದಿನ ದಿನಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಸೇರಿದಂತೆ ಮುಖಂಡರ ಬಳಿ ಹೋಗಿ ನೆರವು ಕೇಳಲಾಗುವುದು ಎಂದರು.
ಮಳವಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವಿ.ಪಿ.ನಾಗೇಶ್ ಮಾತನಾಡಿ, ಈಗಾಗಲೇ ಭವನ ನಿರ್ಮಾಣಕ್ಕೆ ವಿವಿಧ ಶಾಸಕರ ಅನುದಾನದಡಿ ೩೦ ಲಕ್ಷ ರೂ.ಅನುದಾನ ಈಗಗಲೇ ಬಳಕೆಯಾಗಿದೆ, ಮುಂದುವರೆದ ಕಾಮಗಾರಿಗೆ ಧನ ಸಹಾಯ ಸಂಗ್ರಹಿಸಬೇಕಿದೆ, ಮುಂದಿನ ದಿನಗಳಲ್ಲಿ ಹಲವು ನಾಯಕರನ್ನು ಭೇಟಿ ಮಾಡಿ ದೇಣಿಗೆ ಸಂಗ್ರಹಿಸಿ ಭವನ ಕಾಮಗಾರಿಗಳನ್ನು ಶೀಘ್ರದಲ್ಲಿ ಅಂತಿಮಗೊಳಿಸಲಾಗುವುದು ಎಂದರು.
ಸಂಘದ ಕಾರ್ಯದರ್ಶಿ ದೇವರಾಜೇಗೌಡ, ಖಜಾಂಚಿ ಮಾದೇಶ್, ನಿರ್ದೇಶಕರಾದ ಸಿದ್ದಲಿಂಗೇಗೌಡ, ಜಯಮ್ಮ, ಪ್ರಕಾಶ್ ಇದ್ದರು.