ಸಂಸತ್ನ ಭದ್ರತಾ ಲೋಪ ಪ್ರಕರಣದಲ್ಲಿ ಆರೋಪಿಗಳಿಗೆ ಲೋಕಸಭೆಯ ಒಳಗಡೆ ಪ್ರವೇಶಿಸಲು ಪಾಸ್ ನೀಡಿ ವಿವಾದಕ್ಕೆ ಸಿಲುಕಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಈಗ ಮತ್ತೊಂದು ಹೊಸ ವಿವಾದದಲ್ಲಿ ಸಿಲುಕಿದ್ದಾರೆ.
ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಅನುಮತಿ ಇಲ್ಲದೆಯೇ ಅಕ್ರಮವಾಗಿ ಕಡಿದು, ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಶೀಲ್ದಾರ್ ಮಮತಾ ಅವರ ಮೂಲಕ ಬೆಳಕಿಗೆ ಬಂದಿದೆ.
ಇನ್ನು ಈ ಹಗರಣದಲ್ಲಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಕೈಜೋಡಿಸಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಿದ್ದಾರೆ ಎಂದು ವರದಿಯಾಗಿದೆ.
ಅಣ್ಣ @mepratap ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ.
ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಸೀಲ್ದಾರ್… pic.twitter.com/5m5ZYZrMDl
— Karnataka Congress (@INCKarnataka) December 23, 2023
“>
ಈ ಬಗ್ಗೆ ಕಾಂಗ್ರೆಸ್ ತನ್ನ ‘ಎಕ್ಸ್’ ಖಾತೆಯಲ್ಲಿ ಸುಮಾರು 02 ನಿಮಿಷ 11 ಸೆಕೆಂಡ್ಗಳ ವಿಡಿಯೋ ಸಾಕ್ಷ್ಯ ಬಿಡುಗಡೆಗೊಳಿಸಿದೆ. ವಿಡಿಯೋ ಸಮೇತ ಆರೋಪ ಮಾಡಿದ್ದಲ್ಲದೇ, ಪ್ರತಾಪ್ ಸಿಂಹರನ್ನು ಕೂಡ ಟೀಕೆ ಮಾಡಿದೆ.
“ಅಣ್ಣ ಸಂಸತ್ ದಾಳಿಕೋರರಿಗೆ ಪಾಸ್ ನೀಡುವ ಕೆಲಸದಲ್ಲಿದ್ದರೆ, ತಮ್ಮ ವಿಕ್ರಮ್ ಸಿಂಹ ಸಿನಿಮೀಯ ಮಾದರಿಯಲ್ಲಿ ಮರಗಳ್ಳತನದಲ್ಲಿ ತೊಡಗಿದ್ದಾನೆ” ಎಂದು ಗಂಭೀರ ಆರೋಪ ಮಾಡುವ ಮೂಲಕ ಕಿಡಿಕಾರಿದೆ.
ಟ್ವೀಟ್ನಲ್ಲಿ, “ಸಂಸದ ಪ್ರತಾಪ್ ಸಿಂಹನ ಸಹೋದರ ವಿಕ್ರಮ್ ಸಿಂಹ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಾಟ ನಡೆಸಿರುವುದು ದಕ್ಷ ಅಧಿಕಾರಿಯಾದ ತಹಶೀಲ್ದಾರ್ ಮಮತಾ ಅವರ ಮೂಲಕ ಬೆಳಕಿಗೆ ಬಂದಿದೆ. ಇದರಲ್ಲಿ ಕೆಲವು ಅರಣ್ಯ ಇಲಾಖೆಯ ಅಧಿಕಾರಿಗಳೂ ಕೈಜೋಡಿಸಿದ್ದು ಈ ಬಗ್ಗೆ ಸಚಿವ ಖಂಡ್ರೆ ಅವರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅದೇಶಿಸಲಿದ್ದಾರೆ. ನಿಮ್ಮ ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬಸ್ಥರು ಕೊಳ್ಳೆ ಹೊಡೆಯುವುದರಲ್ಲೇ ಬ್ಯುಸಿಯಾಗಿರುವುದೇಕೆ?” ಎಂದು ಬಿಜೆಪಿಯ ನಾಯಕರಲ್ಲಿ ಪ್ರಶ್ನಿಸಿದೆ.
ಆಗಿರೋದೇನು?
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದನಗೂಡು ಎಂಬ ಹಳ್ಳಿಯಲ್ಲಿರುವ ಸರ್ವೆ ನಂಬರ್ 16ರಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ. ಅರಣ್ಯ ಇಲಾಖೆಯ ಶೆಡ್ಯೂಲ್ಡ್ ಪಟ್ಟಿಯಲ್ಲಿರುವ ಪ್ರಮುಖ ಮರಗಳನ್ನು ಕಡಿಯಲಾಗಿದೆ. ಅಂದರೆ ಈ ಮರಗಳನ್ನು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಕಡಿಯಲು ಹಾಗೂ ಸಾಗಾಟ ಮಾಡಲು ಅವಕಾಶವಿಲ್ಲ. ಅಂಥದ್ದರಲ್ಲಿ ಸುಮಾರು 12 ಎಕರೆ ಪ್ರದೇಶದಲ್ಲಿ ಕಡಿದು ಹಾಕಿದ್ದು, ಸಾಗಾಟಕ್ಕೆ ರಾಶಿ ಹಾಕಲಾಗಿದೆ.
ಈ ಬಗ್ಗೆ ಮಾಹಿತಿ ಅರಿತ ದಕ್ಷ ಅಧಿಕಾರಿಯಾದ ಬೇಲೂರು ತಹಶೀಲ್ದಾರ್ ಮಮತಾ ಅವರು ,ಸ್ಥಳಕ್ಕೆ ಡಿ.16ರಂದು ಭೇಟಿ ನೀಡಿ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ಕೂಡ ದಾಖಲಿಸಿದ್ದಾರೆ.
ಈಗ ಬೆಳಕಿಗೆ ಬಂದಿರುವ ಪ್ರಕರಣ ಏನೆಂದರೆ, ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ, ಶುಂಠಿ ಬೆಳೆಯುವ ಉದ್ದೇಶಕ್ಕೆ ಜಯಮ್ಮ ಎಂಬುವವರೊಂದಿಗೆ ನಾಲ್ಕು ಎಕರೆಗಳ ಪ್ರದೇಶಕ್ಕೆ ಡಿ.11ರಂದು ಒಪ್ಪಂದ ಮಾಡಿಕೊಂಡಿದ್ದಾರೆ. ಡಿ.14ರಂದು ಒಪ್ಪಂದ ಮಾಡಿಕೊಂಡಿದ್ದ ಪ್ರದೇಶದಲ್ಲಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೆಯೇ ಅಕ್ರಮವಾಗಿ ಮರಗಳನ್ನು ಕಡಿದು ಹಾಕಲಾಗಿದೆ. ನಂಬಿ, ಹೊನ್ನೆ, ಹಲಸು ಸೇರಿದಂತೆ ನೂರಾರು ಅಮೂಲ್ಯವಾದ ಮರಗಳನ್ನು ಕಡಿದು ಹಾಕಲಾಗಿದ್ದು, ಸಾಗಾಟಕ್ಕೆ ಯತ್ನಿಸಲಾಗಿದೆ.
ಈ ಆರೋಪ ಒಂದು ಕಡೆಯಾದರೆ, ಇನ್ನೊಂದು ಗಂಭೀರ ಆರೋಪ ಕೂಡ ಇದರಲ್ಲಿ ಕೇಳಿಬಂದಿದೆ. ಒಟ್ಟು 12 ಎಕರೆ ಪ್ರದೇಶದಲ್ಲಿ ಮರಗಳನ್ನು ಕಡಿಯಲಾಗಿದೆ. ಇದರಲ್ಲಿ ನಾಲ್ಕೂವರೆ ಎಕರೆ ಪ್ರದೇಶವು ಸರ್ಕಾರಿ ಗೋಮಾಳ ಕೂಡ ಒಳಗೊಂಡಿದ್ದು, ಅದರಲ್ಲಿ ಇದ್ದಂತಹ ಮರಗಳನ್ನು ಕೂಡ ಕಡಿದು ಹಾಕಲಾಗಿದೆ ಎಂಬ ಅಂಶ ಈ ಘಟನೆಯಿಂದ ಬೆಳಕಿಗೆ ಬಂದಿದೆ.
ಈ ನಡುವೆ ಅರಣ್ಯ ಇಲಾಖೆಯವರು ಕೆಲವೊಂದು ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಶುಂಠಿ ಬೆಳೆಯುವ ಉದ್ದೇಶಕ್ಕೆ ಒಪ್ಪಂದ ಮಾಡಿಕೊಂಡಿದ್ದ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಮ್ ಸಿಂಹ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಗಂಭೀರ ಆರೋಪ ಸ್ಥಳೀಯ ಅರಣ್ಯಾಧಿಕಾರಿಗಳ ಮೇಲೆ ಕೇಳಿಬಂದಿದೆ. ಈ ಹಗರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಪಾತ್ರವೂ ಕೇಳಿ ಬಂದಿರುವುದರಿಂದ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.
ಕೃಪೆ: ಈದಿನ.ಕಾಂ