ಮಳವಳ್ಳಿ ತಾಲ್ಲೂಕಿನಾದ್ಯಂತ 21 ಕೂಸಿನ ಮನೆ ಆರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ, ಮೊದಲನೇ ಹಂತದಲ್ಲಿ ದುಗ್ಗನಹಳ್ಳಿ, ಬಂಡೂರು, ಕಲ್ಲುವೀರನಹಳ್ಳಿ, ಕಂದೇಗಾಲ, ನೆಲಮಾಕನಹಳ್ಳಿಯಲ್ಲಿ ಆರಂಭಿಸಲಾಗಿದೆ, ಇದರಿಂದ ಗ್ರಾಮೀಣ ಜನರು ಪ್ರಯೋಜನ ಪಡೆದುಕೊಳ್ಳಬೇಕೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ನೂತನಾಗಿ ಆರಂಭಿಸಿರುವ ಕೂಸಿನ ಮನೆ – ಶಿಶುಪಾಲನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರು ತಮ್ಮ ಮಗುವನ್ನು ಬಿಟ್ಟು ಕೂಲಿಗೆ ಹೋಗಲು ತೊಂದರೆಯಾಗುತ್ತಿದ್ದರಿಂದ ಮಕ್ಕಳನ್ನು ಪೋಷಿಸಲು ಶಿಶುಪಾಲನಾ ಕೇಂದ್ರವನ್ನು ತೆರೆಯಲಾಗುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.
ಅಂಗನವಾಡಿ ಕೇಂದ್ರದಲ್ಲಿ ಮೂರು ವರ್ಷದಿಂದ ಆರು ವರ್ಷದವರೆಗೆ ಮಕ್ಕಳಿಗೆ ಶಿಕ್ಷಣ ಕಲಿಸುವ ಉದ್ದೇಶ ಹೊಂದಲಾಗಿದೆ, ಶಿಶುಪಾಲನಾ ಕೇಂದ್ರದಲ್ಲಿ ತರಬೇತಿ ಹೊಂದಿದ ಸ್ವಯಂ ಸೇವಕರಿಂದ 1ರಿಂದ 3 ವರ್ಷದವರೆವಿಗೂ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ, ಇದರಿಂದ ಕೂಲಿಗೆ ಹೋಗುವ ಪೋಷಕರಿಗೂ ಅನುಕೂಲವಾಗಲಿದ್ದು, ಮಕ್ಕಳು ಅನ್ನ ತಿನ್ನಿಸುವುದನ್ನು ಕಲಿಸುವುದರ ಜೊತೆಗೆ ಬಾಣಾಂತಿಯರಿಗೆ ಮಕ್ಕಳನ್ನು ನೋಡಿಕೊಳ್ಳುವ ಬಗ್ಗೆ ತಿಳುವಳಿಕೆಯನ್ನು ನೀಡಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ಮಮತ, ಗ್ರಾ.ಪಂ ಅಧ್ಯಕ್ಷ ಚನ್ನಿಗರಾಮು,
ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಮಾಜಿ ಅಧ್ಯಕ್ಷ ಕುಳ್ಳಚನ್ನಂಕಯ್ಯ, ನಿರ್ದೇಶಕ ಲಿಂಗರಾಜು, ಗ್ರಾ.ಪಂ ಸದಸ್ಯರಾದ ನಾಗರಾಜು, ಪಾಪಣ್ಣ, ಮುಖಂಡರಾದ ರೇವಣ್ಣ, ನಾಗರಾಜು, ರವಿ, ಶಿವಲಿಂಗು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ತಾ.ಪಂ ಮಾಜಿ ಅಧ್ಯಕ್ಷ ವಿಶ್ವಾಸ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಉದ್ಯೋಗಖಾತರಿ ಯೋಜನಾಧಿಕಾರಿ ದೀಪು ಸೇರಿದಂತೆ ಇತರರು ಇದ್ದರು.