ವ್ಯಕ್ತಿಯೊಬ್ಬನನ್ನು ಅಪಹರಿಸಿ ಕೊಲೆ ಮಾಡಿ ಸುಟ್ಟು ಹಾಕಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಾತನೂರು ಗ್ರಾಮದ ವೆಂಕಟೇಶ್ (33) ಕೊಲೆಯಾದವ. ಘಟನೆ ಸಂಬಂಧ ಬೇವಿನಹಳ್ಳಿ ಗ್ರಾಮದ ಭಿಮೇಶ್, ನಗರದ ಆನೆಕೆರೆ ಬೀದಿ ನಿವಾಸಿಗಳಾದ ಸುನಿಲ್, ವಿನಯ್ ಹಾಗೂ ನಿರಂಜನ್ ಬಂಧಿತರು.
ಮೇ.23ರಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಅವರನ್ನು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಅಪಹರಿಸಿ ಹುಲಿಕೆರೆ ಗ್ರಾಮದ ಮಹಾದೇಶ್ವರ ದೇವಾಲಯದ ಪಕ್ಕದ ನಿರ್ಜನ ಅರಣ್ಯದಲ್ಲಿ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಲಾಗಿತ್ತು.
ವ್ಯಕ್ತಿ ಕಾಣೆಯಾದ ಹಿನ್ನಲೆಯಲ್ಲಿ ಕಾಣೆಯಾಗಿರುವ ಕುರಿತು ದೂರು ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿಯವರ ಮಾರ್ಗದರ್ಶನದಲ್ಲಿ ಪೊಲೀಸ್ ಸಬ್ ಇನ್ಸಪೆಕ್ಟರ್ ಕುಮಾರ್, ಎಎಸ್ಐ ಚಿಕ್ಕಯ್ಯ, ಪೇದೆಗಳಾದ ಜೀಶನ್, ರಾಜೇಂದ್ರ, ಪ್ರಸಾದ್, ಪ್ರವೀಣ್, ಈಶ್ವರ್ ಹಾಗೂ ಸುನೀಲ್’ಕುಮಾರ್ ಅವರ ತಂಡ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.