ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಪೂರಕವಾಗಿ ವರದಿಯಾಗಿರುವ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಹೊಳೆನರಸೀಪುರ ಶಾಸಕ ಎಚ್.ಡಿ.ರೇವಣ್ಣ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಮೇ 13ರ ಸೋಮವಾರಕ್ಕೆ ಮುಂದೂಡಿದೆ.
ಎಚ್.ಡಿ. ರೇವಣ್ಣ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, “ರೇವಣ್ಣ ಅವರ ವಿರುದ್ಧ ಐಪಿಸಿ ಸೆಕ್ಷನ್ 364(ಎ) ಅಡಿ ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ.ಮಹಿಳೆ ಸುರಕ್ಷತೆ ವಿಚಾರ ಪ್ರಸ್ತಾಪಿಸಿ, ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ದಿನವೇ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದಾರೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
“ನನಗೆ ಸುಳ್ಳು ಹೇಳಿ ತಾಯಿ ಕರೆದೊಯ್ದರು ಎಂದು ಸಂತ್ರಸ್ತೆಯ ಪುತ್ರನ ಹೇಳಿಕೆ ದೂರಿನಲ್ಲಿದೆ. ಆದರೆ, ಆಕೆಗೆ ಸುಳ್ಳು ಹೇಳಿ ವಂಚಿಸಿರುವ ಆರೋಪವು ಅಪಹರಣ ಆಗುವುದಿಲ್ಲ. ಸಿಎಂಗೆ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಬಂಧಿಸಬೇಕೆ? ಎಚ್.ಡಿ. ರೇವಣ್ಣ ಹೇಳಿದ್ದಾರೆ ಎಂದು ಮಹಿಳೆ ಕರೆದೊಯ್ಯುವುದು ಹೇಗೆ ಅಪಹರಣವಾಗುತ್ತದೆ? ಇಲ್ಲಿ ಬಲ ಪ್ರಯೋಗದ ಆರೋಪವಿಲ್ಲ. ಮೋಸ ಮಾಡಿ ಕರೆದೊಯ್ದಿರುವ ಆರೋಪವೂ ಇಲ್ಲ. ಆದರೂ ರೇವಣ್ಣರನ್ನು ಒಂದನೇ ಆರೋಪಿ ಮಾಡಲಾಗಿದೆ. ದೂರಿನಲ್ಲಿ ಹೇಳಿರುವಂತೆ ಮಹಿಳೆಯು ರೇವಣ್ಣ ಮನೆಯಲ್ಲಿ ಕೆಲಸಕ್ಕೆ ಇದ್ದವರು.ಸಂತ್ರಸ್ತೆಯನ್ನು ಬೆದರಿಸಿ ದೂರು ದಾಖಲಿಸಿಕೊಳ್ಳಲಾಗುತ್ತಿದೆ” ಎಂದು ಸಿ.ವಿ. ನಾಗೇಶ್ ವಾದಿಸಿದರು.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಯ್ನಾ ಕೊಠಾರಿ ಕೂಡ ವಾದ ಮಂಡಿಸಿ, “ಅರ್ಜಿದಾರರ ಪರ ವಕೀಲರು ತಮ್ಮವಾದ ಮಂಡಿಸಿದ್ದಾರೆ. ನಮಗೆ ವಾದ ಮಂಡಿಸಲು ಕಾಲಾವಕಾಶ ನೀಡಬೇಕು” ಎಂದು ಕೋರಿದರು.
ಇದಕ್ಕೆ ಅಂತಿಮವಾಗಿ ಒಪ್ಪಿದ ನ್ಯಾ.ಸಂತೋಷ್ ಗಜಾನನ ಭಟ್, ಎಸ್ಐಟಿ ಮನವಿ ಪುರಸ್ಕರಿಸಿದ್ದಲ್ಲದೇ, ಸೋಮವಾರ(ಮೇ. 13) ಬೆಳಗ್ಗೆ 11.30ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದರು.
ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪದಡಿ ಬಂಧಿತರಾಗಿರುವ ಶಾಸಕ ರೇವಣ್ಣ ಅವರನ್ನು ನಗರದ 17ನೇ ಎಸಿಎಂಎಂ ನ್ಯಾಯಾಲಯ ಏಳು ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಎಚ್. ಡಿ. ರೇವಣ್ಣ ಮತ್ತು ಎಸ್ಐಟಿ ಪರ ವಕೀಲರ ವಾದ ಆಲಿಸಿದ್ದ ನ್ಯಾಯಾಧೀಶ ರವೀಂದ್ರ ಕುಮಾರ್ ಕಟ್ಟಿಮನಿ, ರೇವಣ್ಣ ಅವರನ್ನು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಆದೇಶಿಸಿದ್ದರು.
ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನು ನೇಮಿಸಿದ ಸರ್ಕಾರ
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ವಿಶೇಷ ತನಿಖಾ ದಳದ (ಎಸ್ಐಟಿ) ಪರವಾಗಿ ವಾದಿಸಲು ಹಿರಿಯ ವಕೀಲರಾದ ಅಶೋಕ್ ನಾಯಕ್ ಮತ್ತು ಜಯಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಗಿದೆ.
ವಿಶೇಷ ತನಿಖಾ ದಳವು ದಾಖಲಿಸುವ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣಗಳನ್ನು ನಡೆಸಲು ಸರ್ಕಾರಿ ಅಭಿಯೋಜಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಏಪ್ರಿಲ್ 28ರಂದು ಬಿ.ಜಯ್ ಕುಮಾರ್ ಸಿಂಗ್ ಅವರ ನೇತೃತ್ವದಲ್ಲಿ ತ್ರಿಸದಸ್ಯ ಎಸ್ಐಟಿ ರಚಿಸಲಾಗಿದೆ. ಎಸ್ಐಟಿ ಪ್ರಕರಣಗಳನ್ನು ನಡೆಸಲು ಮೊದಲಿಗೆ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ಬಿ. ಎನ್. ಜಗದೀಶ್ ನೇಮಕ ಮಾಡಲಾಗಿತ್ತು. ಈಗ ಮತ್ತಿಬ್ಬರು ಹೆಚ್ಚುವರಿ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗಿದೆ.