ನಾಗಮಂಗಲ ಪಟ್ಟಣದ ತಾಲೂಕು ಪಂಚಾಯತಿಯ ಆಡಳಿತ ಸೌಧದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬುಧವಾರ ತಮ್ಮ ಕಚೇರಿ ಉದ್ಘಾಟಿಸಿದರು.
ಕಚೇರಿ ಪ್ರವೇಶಿಸಿದ ಸಚಿವ ಚಲುವರಾಯಸ್ವಾಮಿ ಅವರು ದೇವರಿಗೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿದರು.
ಈ ವೇಳೆ ಮುಖಂಡರುಗಳಾದ ಎಚ್.ಟಿ.ಕೃಷ್ಣೇಗೌಡ, ರಾಜ್ಯ ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ತಿಮ್ಮರಾಯಿಗೌಡ, ಯಶೋಧಮ್ಮ, ವಸಂತಮಣಿ, ಗೀತಾ ದಾಸೇಗೌಡ, ಎಂ.ಪ್ರಸನ್ನ ಸೇರಿದಂತೆ ಹಲವರಿದ್ದರು.
ಅರ್ಥಪೂರ್ಣ ಕೆಂಪೇಗೌಡ ಜಯಂತಿ ಆಚರಣೆ
ತಾಲ್ಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಕೆಂಪೇಗೌಡ ಜಯಂತಿಯ ಪೂರ್ವ ಸಭೆಯಲ್ಲಿ ಭಾಗವಹಿಸಿದ ಚಲುವರಾಯಸ್ವಾಮಿ ಅವರು ನಾಡ ಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ, ಅಚ್ಚುಕಟ್ಟಾಗಿ ಆಚರಿಸುವಂತೆ ತಹಶೀಲ್ದಾರ್ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್,ದೇವಲಾಪುರ ಹೋಬಳಿಯಲ್ಲಿ ಹತ್ತಾರು ಶಾಲೆಗಳು ಮುಚ್ಚಿವೆ ಎಂದು ಸಚಿವರ ಗಮನಕ್ಕೆ ತಂದರು. ಆಗ ಬಿಇಒ ಸುರೇಶ್ ಹಿಂದಿದ್ದ ಬಿಇಒ ಕಾಲದಲ್ಲಿ ಶಾಲೆಗಳು ಮುಚ್ಚಿವೆ ಎಂದರು. ಆಗ ಸಿಟ್ಟಾದ ಸಚಿವ ಚಲುವರಾಯಸ್ವಾಮಿ ಅವರು, ಸುರೇಶ್ ಅವರನ್ನು ಗದರಿ ನೀವು ರಾಜಕಾರಣಿಗಳ ಹಾಗೆ ನಡೆದುಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದರು.
ತಾಲ್ಲೂಕು ಆಡಳಿತ ಸೌಧದ ಒಳಭಾಗದಲ್ಲಿ ಅಶುಚಿತ್ವ ಮತ್ತು ಗಬ್ಬೆದ್ದು ನಾರುತ್ತಿರುವ ಶೌಚಾಲಯಗಳ ಬಗ್ಗೆ ಸಾರ್ವಜನಿಕರು ಮತ್ತು ಮುಖಂಡರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಆಡಳಿತ ಸೌಧವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ, ಲೋಕೋಪಯೋಗಿ ಇಲಾಖೆ, ಭೂಸೇನಾ ನಿಗಮದೊಂದಿಗೆ ಸಮನ್ವಯ ಸಾಧಿಸಿ ಕ್ರಮವಹಿಸುವಂತೆ ತಹಶೀಲ್ದಾರ್ ನಯೀಮ್ ಉನ್ನೀಸ ಅವರಿಗೆ ಸೂಚಿಸಿದರು.
ಈ ಸಂದರ್ಬ ತಾ.ಪಂ.ಇ ಒ ಚಂದ್ರಮೌಳಿ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ನಿರಂಜನ್ ಮತ್ತು ಅಶೋಕ್ ಮುಖಂಡರಾದ ಹನುಮಂತು, ಆರ್.ಕೃಷ್ಣೇಗೌಡ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಮಂಜುನಾಥ ಸೇರಿದಂತೆ ಹಲವರಿದ್ದರು.
ಸಚಿವರ ಮುಂದೆಯೇ ವಾಗ್ವಾದ
ಸಚಿವ ಚಲುವರಾಯಸ್ವಾಮಿ ಅವರ ಮುಂದೆಯೇ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಕುಮಾರ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್ ನಡುವೆ ವಾಗ್ವಾದ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್. ಜೆ.ರಾಜೇಶ್ ಶಿಕ್ಷಕ ಸಿ.ಜೆ.ಕುಮಾರ್ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ. ಅವರು ಈ ಸಭೆಗೆ ಬರುವಂತಿಲ್ಲ,ಆದರೂ ಬಂದಿದ್ದಾರೆ. ಬಿಇಒ ಇಲ್ಲೇ ಇದ್ದಾರೆ, ಕ್ರಮ ಕೈಗೊಳ್ಳಲಿ ಎಂದು ಸಚಿವರ ಗಮನಕ್ಕೆ ತಂದರು.
ಆಗ ಸಿಟ್ಟಿನಿಂದ ಸಿ.ಜೆ.ಕುಮಾರ್,ನೀನು ಸಭೆಗೆ ಬರುವಂತಿಲ್ಲ ಎಂದರು.ಇಬ್ಬರೂ ಏರಿದ ಧ್ವನಿಯಲ್ಲಿ ವಾಗ್ವಾದ ನಡೆಸಿದರು. ಆಗ ಮಧ್ಯ ಪ್ರವೇಶಿದ ಸಚಿವರು ಇದು ವಿಷಯ ಪ್ರಸ್ತಾಪಕ್ಕೆ ಸರಿಯಾದ ಸಂದರ್ಭವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಕಿವಿ ಮಾತು ಹೇಳಿ ಇಬ್ಬರನ್ನು ಸಮಾಧಾನ ಪಡಿಸಿದರು.