ದೇವಾಲಯಗಳು ನಮ್ಮ ಸಂಸ್ಕೃತಿಯ ಪ್ರತೀಕ.ನಮ್ಮ ಹಿರಿಯರು ಗ್ರಾಮದ ರಕ್ಷಣೆಗಾಗಿ ಗ್ರಾಮ ದೇವತೆಯ ದೇವಸ್ಥಾನ ನಿರ್ಮಿಸಿ ಪೂಜಿಸಿಕೊಂಡು ಬರುತ್ತಿದ್ದಾರೆ ಎಂದು ಮಿತ್ರ ಫೌಂಡೇಷನ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ತಾಲೂಕಿನ ಕಸಬಾ ಹೋಬಳಿಯ ಚಿಲ್ಲದಹಳ್ಳಿ ಗ್ರಾಮದಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಪುನರ್ನಿರ್ಮಾಣ ಗೊಂಡಿರುವ ಗ್ರಾಮದೇವತೆ ಶ್ರೀ ಮಾಯಮ್ಮ ದೇವಿ ಅಮ್ಮನವರ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವಾಲಯ ನಿರ್ಮಾಣದಿಂದ ಹಬ್ಬ- ಹರಿದಿನಗಳಲ್ಲಿ ಜನರು ಒಂದೆಡೆ ಸೇರಿ ಪೂಜೆ ಸಲ್ಲಿಸಿ, ಪರಸ್ಪರ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಜನರು ಸಂತೋಷದಿಂದ, ಪರಸ್ಪರ ಸೌಹಾರ್ದತೆಯಿಂದ ಜೀವನ ನಡೆಸಲು ಸಹಕಾರಿಯಾಗಿತ್ತು. ಈ ನಿಟ್ಟಿನಲ್ಲಿ ಚಿಲ್ಲದಹಳ್ಳಿ ಗ್ರಾಮಸ್ಥರು ಶಿಥಿಲಾವಸ್ಥೆಯಲ್ಲಿದ್ದ ಗ್ರಾಮದೇವತೆ ಶ್ರೀ ಮಾಯಮ್ಮ ದೇವಾಲಯವನ್ನು ಸುಮಾರು 80 ಲಕ್ಷ ರೂ.ಗಳ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
ಆರ್ ಟಿ ಓ ಅಧಿಕಾರಿ ಮಲ್ಲಿಕಾರ್ಜುನ್ ಮಾತನಾಡಿ,ಗುಡಿ-ಗೋಪುರಗಳು, ಹಬ್ಬ-ಹರಿದಿನಗಳು, ಜಾತ್ರೆ-ಉತ್ಸವಗಳು ನಮ್ಮ ಪರಂಪರೆ. ಗ್ರಾಮೀಣ ಪ್ರದೇಶಗಳಲ್ಲಿ ಇರುವ ದೇವಾಲಯಗಳ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ಚಿಲ್ಲದಹಳ್ಳಿ ಗ್ರಾಮಸ್ಥರು ಕೇವಲ 1 ವರ್ಷದ ಅವಧಿಯಲ್ಲಿ ಗ್ರಾಮ ದೇವತೆ ಶ್ರೀ ಮಾಯಮ್ಮ ನವರ ದೇವಾಲಯವನ್ನು ಸುಂದರವಾಗಿ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಮನುಷ್ಯ ತನಗೆ ಬೇಕಾದ ಶಾಂತಿ ಮತ್ತು ನೆಮ್ಮದಿಯನ್ನು ಯಾವುದೇ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ದೇವಾಲಯಗಳಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ, ದೇವಾಲಯದ ಹೊರಗಡೆ ಕುಳಿತಿರುವ ಬಡವರಿಗೆ ಕೈಲಾದ ದಾನ,ಧರ್ಮ ಮಾಡಿದಾಗ ಮನಸ್ಸಿನ ಜಂಜಾಟಗಳನ್ನು ದೂರ ಮಾಡಿ ಶಾಂತಿ-ನೆಮ್ಮದಿಯನ್ನು ಪಡೆದುಕೊಳ್ಳಬಹುದು. ಗ್ರಾಮಸ್ಥರು ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾಧಿಗಳಿಗೆ ಮೂರು ದಿನವೂ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಿರುತೆರೆ ಕಲಾವಿದ ಅಬಾರಾಶೆ ಚಂದ್ರಶೇಖರ್ ನೇತೃತ್ವದ ಕಲಾವಿದರು ಭಕ್ತಿ ಗೀತೆಗಳ ಕಾರ್ಯಕ್ರಮ ನಡೆಸಿದರು.
ಚಿಲ್ಲದಹಳ್ಳಿ ಶ್ರೀ ಮಾಯಮ್ಮ ದೇವಿ ದೇವಾಲಯ ಜೀರ್ಣೋದ್ದಾರ ಸಮಿತಿ ಟ್ರಸ್ಟ್ ಅಧ್ಯಕ್ಷ ಪಟೇಲ್ ನಾಗೇಗೌಡ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ತಾ.ಪಂ.ಮಾಜಿ ಸದಸ್ಯ ಮಾಧವ ಪ್ರಸಾದ್, ದಾನಿಗಳಾದ ಇಂಜಿನಿಯರ್ ಚಂದ್ರೇಗೌಡ, ಜಯರಾಮು, ದೇವರಾಜು, ಜವರಣ್ಣನ ರಮೇಶ್, ವರುಣೇಶ್, ಮೆಣಸ ರಮಾನಂದ್, ಶಿಕ್ಷಣ ಇಲಾಖೆಯ ಅಕ್ಷರ ದಾಸೋಹ ಅಧಿಕಾರಿ ಸಿ.ಎನ್.ಯತೀಶ್, ಕೆ.ಬಿ.ಸಿ.ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಆರ್.ಶ್ರೀನಿವಾಸ್, ರಮೇಶ್, ಮಾಯಮ್ಮ ದೇವಾಲಯ ಟ್ರಸ್ಟಿನ ಉಪಾಧ್ಯಕ್ಷ ವೆಂಕಟೇಶ್, ಹರೀನಹಳ್ಳಿ ರಘು, ಕಾರ್ಯದರ್ಶಿ ಜಯರಾಮೇಗೌಡ, ಖಜಾಂಚಿ ಮಹೇಂದ್ರ, ಪಟೇಲ್ ಬಲರಾಮೇಗೌಡ, ಮಂಜೇಗೌಡ, ಪೂಜಾರಿ ಕೃಷ್ಣೇಗೌಡ, ಬಸವರಾಜು, ಸಿ.ಎನ್.ಸತೀಶ್ , ಮಂಜೇಗೌಡ, ಕುಮಾರ್, ಅಘಲಯ ರಮೇಶ್, ಬೊಮನಾಯಕನಹಳ್ಳಿ ಮಾಯಣ್ಣ, ತಮ್ಮಯ್ಯಣ್ಣ, ಎ.ಬಿ.ಸುಬ್ಬೇಗೌಡ, ಎ.ಸಿ.ಕಾಂತರಾಜು, ಎ.ಬಿ.ಅಶೋಕ್ ಸೇರಿದಂತೆ ಹಲವರಿದ್ದರು