ಶೋಷಿತರ ಸ್ವಾಭಿಮಾನದ ಸಂಕೇತವಾದ ಭೀಮಾ ಕೊರೇಂಗಾವ್ ವಿಜಯೋತ್ಸವವು ಅಸ್ಮಿತೆಯ ಸಂಕೇತವಾಗಿದೆ ಎಂದು ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಹೇಳಿದರು.
ಮಂಡ್ಯ ಗಾಂಧಿ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಬಿ.ಕೃಷ್ಣಪ್ಪ ಬಣ ಜಿಲ್ಲಾ ಶಾಖೆ ಇವರು ಆಯೋಜಿಸಿದ್ದ ಭೀಮಾ ಕೋರೇಂಗಾವ್ ವಿಜಯೋತ್ಸವ, ಸಂವಿಧಾನ ದಿನಾಚರಣೆ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ 50ನೇ ವರ್ಷದ ಸಂಭ್ರಮಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂದಿನ ಭಾರತದೇಶದಲ್ಲಿ ಪೇಶ್ವೆಗಳ ವಿರುದ್ದ ನಡೆದ ಭೀಮಾ ಕೊರೇಂಗಾವ್ ಯುದ್ಧವು ಘನತೆಯ ಬದುಕಿಗಾಗಿ ನಡೆದ ಯುದ್ಧವಾಗಿದೆ, ಅಸ್ಮಿತೆಯ ಸಂಕೇತವಾಗಿದೆ, ಅಂದಿನಿಂದ ಅಂಬೇಡ್ಕರ್ ಅವರ ಸಂಶೋಧನೆಯಿಂದ ಬೆಳಕಿಗೆ ಬಂದು ಲೋಕಮಾನ್ಯವಾಗುತ್ತಿದೆ ಎಂದು ನುಡಿದರು.
ಸಂವಿಧಾನವು ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಪ್ರಜ್ಞೆಯನ್ನು ಮೂಡಿಸಿದೆ, ಎಲ್ಲರ ಉಸಿರಾಟವಾಗಿದೆ, ಸಂವಿಧಾನ ಅಡಿಯಲ್ಲಿ ಆಡಳಿತ ಸಾಗುತ್ತಿದೆ, ವಿಶ್ವದಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ವಾಗಿ ಹೊರಹೊಮ್ಮಲು ಸಾಧ್ಯವಾಗಿದೆ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ವಿದ್ವತ್ತಿನಿಂದ ವಿಶ್ವ ಮಾನವರಾಗಿದ್ದಾರೆ, ಅವರ ಹೋರಾಟ ದಿಕ್ಸೂಚಿ, ಸಂವಿಧಾನ ಫಲ, ಆಶಯಗಳು ನಮ್ಮಗಳ ಪ್ರಗತಿಗೆ ಪ್ರೇರಣೆಯಾಗಿದೆ, ಅವರ ಸದಾಶಯಗಳನ್ನು ಕಾರ್ಯಗತ ಮಾಡಲು ಮುಂದಾಗಬೇಕಿದೆ ಎಂದು ತಿಳಿಸಿದರು.
ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಅಂದಾನಿ ಸೋಮನಹಳ್ಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರಾಜ್ಯ ಸರ್ಕಾರವು ಸಂವಿಧಾನ ಜಾಗೃತಿ ಜಾಥ ಮಾಡುತ್ತಿರುವುದು ಉತ್ತಮ ಆದರೆ, ಎಸ್ಸಿಎಸ್ಟಿ ಅಭಿವೃದ್ದಿಗಾಗಿ ಇರುವ ಅನುದಾನನ್ನು ಬಳಸಿ ಮಾಡುತ್ತಿರುವುದು ದುರಂತ, ಮುಖ್ಯಮಂತ್ರಿಗಳ ಅನುದಾನದಲ್ಲಿ ಜಾಗೃತಿ ವೆಚ್ಚವನ್ನು ಭರಿಸಬಹುದಿತ್ತು ಎಂದು ಎಚ್ಚರಿಸಿದರು.
ವೇದಿಕೆಯಲ್ಲಿ ಕದಸಂಸ ಸಂಸ್ಥಾಪಕ ಸದಸ್ಯ ಶ್ರೀಧರ್ ಕಲಿವೀರ ಪ್ರಧಾನ ಭಾಷಣ ಮಾಡಿದರು. ಇದೇ ಸಂಧರ್ಭದಲ್ಲಿ ಭೀಮಗೀತೆಗಳನ್ನು ಹಾಡಲಾಯಿತು, ಸಾಧಕರನ್ನು ಅಭಿನಂದಿಸಿದರು. ಸಂವಿಧಾನ ಪೀಠಿಕೆಯನ್ನು ಓದಿ ಪ್ರಮಾಣವಚನ ಸ್ವೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕ ಎಂ ಶಿವು ಮದ್ದೂರು, ಕದಂಬ ಸೇನೆ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಮಿತಿ ಸದಸ್ಯ ಬಿಎಂ ಸತ್ಯ ಬೆಸಗರಹಳ್ಳಿ, ಡಿ.ಕೆ ಅಂಕಯ್ಯ, ಮೂರ್ತಿ, ಜಿಲ್ಲಾ ಮಾಜಿ ಸಂಚಾಲಕ ಅಣ್ಣೂರು ರಾಜಣ್ಣ, ಜಿಲ್ಲಾ ಸಂಚಾಲಕಿ ಎಂ.ಎಚ್ ಗೀತಾ, ನೌಕರರ ಒಕ್ಕೂಟದ ಮುಖಂಡ ಚಿಕ್ಕಮಂಡ್ಯ ಮೋಹನ್ಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಎಸ್ ಉಮೇಶ್ ಉಮ್ಮಡಹಳ್ಳಿ, ಚಂದಗಾಲು ಗುರುಶಂಕರ್, ಮಂಜು, ಬಿ ಶ್ರೀನಿವಾಸ್, ಮೆಹಬೂಬ್, ರಂಗಸ್ವಾಮಿ ಲಕ್ಷ್ಮಿಪುರ, ಬಿ.ಪಿ ಗಿರೀಶ್, ರಾಜೇಶ್, ನಿರಂಜನ್ ಬೌದ್ದ್, ಮುರುಗನ್, ರಂಗಸ್ವಾಮಿ, ಬಿಕೆ ರವಿ ಮತ್ತಿತರರಿದ್ದರು