ವಿಶ್ವಜ್ಞಾನಿ ಸೇವಾ ಟ್ರಸ್ಟ್ (ರಿ) ಮಂಡ್ಯ, ರಕ್ತನಿಧಿ ಕೇಂದ್ರ ಮಿಮ್ಸ್ ಮಂಡ್ಯ, ಪ್ರಕಾಶ್ ತಳಗವಾದಿ ಸಮಾನ ಮನಸ್ಕರ ವೇದಿಕೆ ಮಳವಳ್ಳಿ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಳವಳ್ಳಿ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.26ರಂದು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಗಳ ನೌಕರರ ಸಂಘದ ಗೌರವಾಧ್ಯಕ್ಷ ತಾಳಶಾಸನ ಮೋಹನ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಕ್ತದಾನ ಶಿಬಿರವು ಮಳವಳ್ಳಿ ಬಸ್ ನಿಲ್ದಾಣದಲ್ಲಿ ನಡೆಯಲಿದೆ, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಕ್ತದಾನವನ್ನು ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಕೂಡ ಉತ್ತಮಗೊಳಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬಹುಧರ್ಮ, ಬಹುಸಂಸ್ಕೃತಿ ಮತ್ತು ವಿಭಿನ್ನ ಆಚರಣೆಗಳು ಇರುವ ನಮ್ಮ ದೇಶದ ಪ್ರತಿಯೊಬ್ಬರಿಗೂ ಪೂರಕವಾದ ಸಮಪಾಲು ಸಮಬಾಳು ಎಂಬ ಆಧಾರದ ಮೇಲೆ ಸಾಮಾಜಿಕ ನ್ಯಾಯವನ್ನು ನೀಡಲು ವಿಶ್ವದಲ್ಲಿಯೇ ಬೃಹತ್ ಗಾತ್ರದ ಸಂವಿಧಾನವನ್ನು ರಚನ ಮಾಡಿ 1949 ನವೆಂಬರ್ 26 ರಂದು ಸರ್ಕಾರಕ್ಕೆ ಸಮರ್ಪಣೆ ಮಾಡಿದರೂ ಕೂಡ ಅದನ್ನು ಅಧಿಕೃತವಾಗಿ ಸರ್ಕಾರ ಜಾರಿಗೆ ತಂದದ್ದು 1950 ಜನವರಿ 26 ರಂದು, ಈ ದಿನ 73ನೇ ವರ್ಷಾಚರಣೆಯ ಸಂದರ್ಭದಲ್ಲಿ ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ ಸಹಾಯವಾಗಲಿ ಎಂಬ ಉದ್ಧೇಶದಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಸಂಯೋಜಕರಾದ ಬಾಲರಾಜು, ಲೋಕಸರ ಬಾಲರಾಜು ಹಾಗೂ ವಿಶ್ವಜ್ಞಾನಿ ಸೇವಾ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ ಉಪಸ್ಥಿತರಿದ್ದರು.