ರಾಜ್ಯದಲ್ಲಿ ಮಳೆಯ ತೀವ್ರ ಕೊರತೆ ಹಿನ್ನಲೆಯಲ್ಲಿ ಬರ ಘೋಷಣೆಗೆ ಮುನ್ನ ಕೆಂದ್ರದ ಮಾನದಂಡದಂತೆ ಮಾಸಾಂತ್ಯದೊಳಗೆ ಬೆಳೆ ಸಮೀಕ್ಷೆ ನಡೆಸಿ ವರದಿ ಪಡೆಯಲು ಸಚಿವ ಸಂಪುಟ ಉಪ ಸಮುತಿ ತೀರ್ಮಾನಿಸಿದೆ.
ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಪ್ರಕೃತಿ ವಿಕೋಪದಿಂದ ಉದ್ಬವಿಸಬಹುದಾದ ಪರಿಸ್ಥಿತಿ ಪರಾಮರ್ಶಿಸಲು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಸಿದ ನಂತರ ಕಂದಾಯ ಸಚಿವರಾದ ಕೃಷ್ಣಾ ಬೈರೇಗೌಡ ಹಾಗೂ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ಒದಗಿಸಿದರು.
ರಾಜ್ಯಾದ 27ಜಿಲ್ಲೆಗಳಲ್ಲಿ ಮಳೆಯ ತೀವ್ರ ಕೊರತೆ ಎದುರಾಗಿದೆ ಮುಂದಿನ ಕೆಲವು ದಿನಗಳು ಹೀಗೆ ಪರಿಸ್ಥಿತಿ ಮುಂದುವರೆದರೆ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ ಅದನ್ನು ನಿಭಾಯಿಸುವ ಮಾರ್ಗೋಪಾಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದೆ. 2016 ಹಾಗೂ 2020ರ ಕೇಂದ್ರದ ಮಾರ್ಗಸೂಚಿ ಗಳನ್ವಯ ಬರ ಘೋಷಣೆಗೆ ಮೊದಲು ಕೆಲವೊಂದು ಅಂಶಗಳನ್ನು ಪರಿಗಣಿಸಲೇ ಬೇಕಾಗಿದೆ ಹಾಗಾಗಿ ನಾಳೆಯಿಂದಲೇ ಈ ಎಲ್ಲಾ ಜಿಲ್ಲೆಗಳ 121ತಾಲ್ಲೂಕುಗಳಲ್ಲಿ (ಗ್ರೌಡ್ ಟ್ರುಥ್ /ವೆರಿಫಿಕೇಷನ್ ಗಾಗಿ) ಬೆಳೆ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿ ಮೂಲಕ ವರದಿ ಪಡೆಯಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಹಾವಾಮಾನ ವರದಿ,ಮಳೆ ಕೊರತೆ, ಬೆಳೆ ಪರಿಸ್ಥಿತಿ, ಮೇವಿನ ಲಭ್ಯತೆ, ಕೆರೆಗಳು,ಜಲಾಶಯದ ನೀರಿನ ಸಂಗ್ರಹ, ಕುಡಿಯುವ ನೀರಿನ ಪರಿಸ್ಥಿತಿ ಕುರಿತು ವಾಸ್ತವ ಅಂಶಗಳು ಹಾಗೂ ಕೈಗೊಳ್ಳಬೇಕಾದ ಮಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಲಾಗಿದೆ.
ಜಿಲ್ಲಾಧಿಕಾರಿಯವರ ವರದಿ ನಂತರ ಪುನಃ ಉಪ ಸಮತಿ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹವಾಮಾನ ಮುನ್ಸೂಚನೆಯಂತೆ ಆಗಷ್ಟ್ ನಲ್ಲಿ ಉಳಿದ ದಿನಗಳು ಹಾಗೂ ಸೆಪ್ಟೆಂಬರ್ ನಲ್ಲಿ ಸಾಧಾರಣ ಅಥವಾ ವಾಡಿಕೆಗಿಂತ ಕಡಿಮೆ ಮಳೆಯಾಗುವ ವರದಿ ಇದೆ. ಜೂನ್ ತಿಂಗಳಿನಲ್ಲಿ ಮಳೆ ಕೊರತೆ ,ಜುಲೈ ನಲ್ಲಿ ಅಧಿಕ ಮಳೆ ಆಗಸ್ಟ್ ನಲ್ಲಿ ಮತ್ತೆ ತೀವ್ರ ಕೊರತೆ ಕಾಡಿದೆ ಇದರಿಂದ ತಕ್ಷಣ ಬರ ಘೋಷಣೆಗೆ ಮಾನದಂಡಗಳು ತೊಡಕಾಗಿವೆ .ಇದರ ಸಡಿಲಿಕೆ ಕೋರಿ ಕೇಂದ್ರ ಸರ್ಕಾರಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಎನ್.ಡಿ.ಆರ್.ಏಫ್ /ಎಸ್.ಡಿ.ಆರ್.ಎಫ್ ನಿಧಿಯಡಿ ಎಲ್ಲಾ ಜಿಲ್ಲಾಧಿಕಾರಿಗಳ ಬಳಿ ಒಟ್ಟಾರೆ 520 ಕೋಟಿ ರೂ ಹಣ ಇದೆ .ಪರಿಸ್ಥಿತಿ ತುರ್ತು ನಿರ್ವಹಣೆಗೆ ಯಾವುದೇ ಕೊರತೆ ಇಲ್ಲ ಅದರೆ ಬರ ಘೋಷಣೆಗೆ ಅಗತ್ಯ ಮಾರ್ಗಸೂಚಿ ಪಾಲನೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವರಾದ ಕೃಷ್ಣಾ ಬೈರೇಗೌಡ ಹೇಳಿದರು
ಕೃಷಿ ಸಚಿವರಾದ ಎನ್ ಚಲುವರಾಯ ಸ್ವಾಮಿ ಅವರು ಮಾತನಾಡಿ ರಾಜ್ಯದಲ್ಲಿ ಶೇ 78 ರಷ್ಟು ಬಿತ್ತನೆಯಾಗಿದೆ .
ಈಗ ಅಲ್ಲಲ್ಲಿ ಬೆಳೆ ಹಾನಿ ವರದಿಯಾಗಿದೆ , ಸಂಪೂರ್ಣ ಬೆಳೆ ಒಣಗಿಲ್ಲ .ಆದರೆ ಬಹುತೇಕ ಎಲ್ಲಾ ತಾಲ್ಲೂಕುಗಳಲ್ಲಿ ತೇವಾಂಶ ಕೊರತೆ ಪ್ರಾರಂಭವಾಗಿದೆ .ಹೀಗೆ ಮುಂದುವರೆದರೆ ಹೆಚ್ಚಿನ ಪ್ರಮಾಣ ಬೆಳೆ ಹಾನಿ ಉಂಟಾಗುವ ಆತಂಕ ಇದೆ ಎಂದರು.
ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕಾ ಖರ್ಗೆ ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.