ಕಾರೊಂದು ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳೆದ ರಾತ್ರಿ 11.30 ರ ವೇಳೆಯಲ್ಲಿ ಮಳವಳ್ಳಿ ಸಮೀಪದ ಮಾರೇಹಳ್ಳಿ ಕಣಿಗಲ್ ಹಳ್ಳದ ಬಳಿ ಜರುಗಿದೆ.
ಮಳವಳ್ಳಿ – ಕೊಳ್ಳೇಗಾಲ ಹೆದ್ದಾರಿ ರಸ್ತೆಯ ಕಣಿಗಲ್ ಹಳ್ಳದ ಬಳಿ ಹೋಗುತ್ತಿದ್ದ ಆಟೋಗೆ ವೇಗವಾಗಿ ಬಂದ ಟಾಟಾ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಆಗ ಆಟೋ ರಸ್ತೆ ಬದಿಯ ಹಳ್ಳದ ಪೊದೆಯೊಂದಕ್ಕೆ ತೂರಿಕೊಂಡಿದೆ.
ಈ ವೇಳೆ ಆಟೋ ದಲ್ಲಿ ಇದ್ದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬೆಂಗಳೂರಿನ ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಕಾರ್ಯದರ್ಶಿ ರವಿಕುಮಾರ್ (50) ಭಾಸ್ಕರ್ (48)ಹಾಗೂ ಆಟೋ ಚಾಲಕ ಮದ್ದೂರು ತಾಲ್ಲೂಕು ಹುಲಿಗೆರೆ ಪುರ ಗ್ರಾಮದ ಶ್ರೀನಿವಾಸ್ (35)ಎಂಬುವರೇ ಮೃತಪಟ್ಟವರು.
ಮೂಲತಃ ಕಣಿಕಹಳ್ಳಿ ಗ್ರಾಮದವರಾದ ರವಿಕುಮಾರ್ ಅವರ ಊರಿಗೆ ಈ ಮೂವರು ಆಟೋದಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ.
ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ಸಹ ಜಖಂ ಗೊಂಡಿದೆ. ಕಾರಿನಲ್ಲಿ ಇದ್ದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ಇನ್ಸ್ ಪೆಕ್ಟರ್ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರಿ ದಾಖಲಿಸಿ ಕೊಂಡಿದ್ದಾರೆ.