ಪ್ರಧಾನ ಮಂತ್ರಿ ಕಾರ್ಯಾಲಯ(ಪಿಎಂಒ) 2019ರ ಪೌರತ್ವ ತಿದ್ದುಪಡಿ ಕಾಯ್ದೆಗೆ (ಸಿಎಎ) ಇಂದು ಅಧಿಸೂಚನೆ ಹೊರಡಿಸಿದ್ದು, ಕಾಯ್ದೆಯು ಅಧಿಕೃತವಾಗಿ ಜಾರಿಗೆ ಬಂದಿದೆ ಎಂದು ತಿಳಿಸಿದೆ.
“ಮೋದಿ ಸರ್ಕಾರವು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನವನ್ನು ಘೋಷಿಸಿದೆ.ಇದು 2019ರ ಬಿಜೆಪಿ ಪ್ರಣಾಳಿಕೆಯ ಅವಿಭಾಜ್ಯ ಅಂಗವಾಗಿತ್ತು. ಇದು ಭಾರತದಲ್ಲಿ ಶೋಷಣೆಗೆ ಒಳಗಾದವರಿಗೆ ಸುಗಮ ದಾರಿ ಮಾಡಿಕೊಡುತ್ತದೆ” ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಅಧಿಸೂಚನೆಯನ್ನು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶೀಘ್ರದಲ್ಲೇ ಹೊರಡಿಸಿದೆ. ಕಾಯ್ದೆಯು 2019ರ ಡಿಸೆಂಬರ್ 9 ರಂದು ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಡಿಸೆಂಬರ್ 11 ರಂದು ಅಂಗೀಕಾರಗೊಂಡಿತ್ತು. ಕಾಯ್ದೆ ಜಾರಿಗೆ 2019ರ ಡಿಸೆಂಬರ್ 12ರಂದು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಲಾಗಿತ್ತು.
1955ರ ಪೌರತ್ವ ಕಾಯ್ದೆಯನ್ನು ಮಾರ್ಪಡಿಸಲಾಗಿದ್ದು, ಅಫ್ಘಾನ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ದಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ಪಡೆಯಲು ದಾರಿ ಮಾಡಿಕೊಡುತ್ತದೆ. ವಿಶೇಷವಾಗಿ ಹಿಂದೂ, ಸಿರ್ಖ, ಬೌದ್ಧರು, ಜೈನರು, ಪಾರ್ಸಿಗಳು ಹಾಗೂ ಕ್ರೈಸ್ತರು 2014 ಡಿಸೆಂಬರ್ 31ರೊಳಗೆ ದಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಆಗಮಿಸಿದವರು ಪೌರತ್ವ ಪಡೆಯಲು ಅನುಕೂಲ ಮಾಡಿಕೊಡುತ್ತದೆ.
ಆದಾಗ್ಯೂ, ಮುಸ್ಲಿಮ್ ಸಮುದಾಯವನ್ನು ಹೊರಗಿಟ್ಟು ಕಾಯ್ದೆಯನ್ನು ಅಂಗೀಕರಿಸಿದ ನಂತರ ವಿವಾದ ಉಂಟಾಗಿ ಭಾರತದಾದ್ಯಂತ ಪ್ರತಿಭಟನೆಗಳು ಜರುಗಿದವು. ಜಾತ್ಯತೀತ ದೇಶದಲ್ಲಿ ಒಂದು ಸಮುದಾಯವನ್ನು ಹೊರಗಿಟ್ಟ ಕಾರಣ ಆಕ್ರೋಶ ವ್ಯಕ್ತವಾಯಿತು. ಗಮನಾರ್ಹವಾಗಿ, ಧರ್ಮವನ್ನು ಬಳಸಿ ಜಾರಿಗೊಳಿಸಿದ ಮೊದಲ ಕಾಯ್ದೆಯ ಉದಾಹರಣೆ ಇದಾಗಿದೆ.
ಅಸ್ಸಾಂ ಒಳಗೊಂಡ ಕೆಲವು ರಾಜ್ಯಗಳಲ್ಲಿ ವಲಸಿಗ ಅಲ್ಪಸಂಖ್ಯಾತರ ಬಗ್ಗೆ ಕಾಯ್ದೆಯು ಆತಂಕ ಸೃಷ್ಟಿ ಮಾಡಿರುವುದು ಸೇರಿದಂತೆ ಹಲವು ವಿವಾದಿತ ಅಂಶಗಳ ಬಗ್ಗೆ ವಿಪಕ್ಷ ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ.