ಸೇವೆ ಕಾಯಂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರ ಅಂತ್ಯಗೊಂಡಿದೆ. ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯದ ನಗರಸಭೆ ಆವರಣದಲ್ಲಿ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರ ಇಂದು ಮುಕ್ತಾಯಗೊಂಡಿದೆ.
ಗುತ್ತಿಗೆ ಪದ್ಧತಿ ಬದಲು ಪೌರಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಆಗ್ರಹಿಸಿ ಹಾಗೂ ಪೌರಕಾರ್ಮಿಕರ ನೇರ ನೇಮಕಾತಿಗಾಗಿ ಒತ್ತಾಯಿಸಿ ಕಳೆದ ಐದು ದಿನಗಳಿಂದ ಪೌರಕಾರ್ಮಿಕರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಡಲಾಯಿತು.
ನಗರಸಭಾ ಅಧ್ಯಕ್ಷರಾದ ಹೆಚ್.ಎಸ್.ಮಂಜುನಾಥ್ ಹಾಗೂ ಪೌರಾಯುಕ್ತರಾದ ಮಂಜುನಾಥ್ ರವರು ಡಾ.ಬಿ.ಆರ್.ಆಂಬೇಡ್ಕರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪೌರಕಾರ್ಮಿಕರಿಗೆ ಹಣ್ಣು ಮತ್ತು ಸಿಹಿ ತಿನ್ನಿಸಿದರು.ನಂತರ ಪೌರಕಾರ್ಮಿಕರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಗರಸಭೆ ಅಧ್ಯಕ್ಷ ಹೆಚ್.ಎಸ್.ಮಂಜು ಮಾತನಾಡಿ, ಹೊರಗುತ್ತಿಗೆ ನೌಕರರು ಕಳೆದ 5 ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಂಡಿದ್ದರು. ರಾಜ್ಯ ಸರ್ಕಾರ ಭರವಸೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರಿಂದ ಪ್ರತಿಭಟನೆಯನ್ನು ಕೈಬಿಡಲಾಗಿದೆ. ಕಳೆದ 5 ದಿನಗಳಿಂದ ನಗರ ಸ್ವಚ್ಛವಾಗದೆ ಅನೈರ್ಮಲ್ಯವಾಗಿತ್ತು. ಪೌರಕಾರ್ಮಿಕರು ಇಂದಿನಿಂದಲೇ ನಗರವನ್ನು ಸ್ವಚ್ಛಗೊಳಿಸಿ, ಸುಂದರ ನಗರವನ್ನಾಗಿ ಮಾಡಲಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಮಂಜುನಾಥ್, ನಗರಸಭಾ ಸದಸ್ಯರುಗಳು ಸೇರಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದರು.