ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮೈತ್ರಿ ಅಭ್ಯರ್ಥಿ ವಿರುದ್ಧ ಸ್ವಾಭಿಮಾನದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ಮಾಡಿದ ಡಾ.ಎಚ್.ಎನ್.ರವೀಂದ್ರ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಕಿಸಾನ್ ಕಾಂಗ್ರೆಸ್ ಮೇಲುಕೋಟೆ ಘಟಕದ ಅಧ್ಯಕ್ಷ ಸಿ.ಆರ್.ರಮೇಶ್ ಹೇಳಿದರು.
ದೇವೇಗೌಡರು, ಕುಮಾರಸ್ವಾಮಿ ಮಂಡ್ಯದಲ್ಲಿ ನಿಲ್ಲಬಹುದು. ಆದರೆ ಅದೇ ಕುಟುಂಬದ ನಿಖಿಲ್ ನಿಲ್ಲುವಂತಿಲ್ಲವೇ, ಅವರಿಗೆ ಅರ್ಹತೆ ಇಲ್ಲವೇ. ನಿಖಿಲ್ ವಿರುದ್ಧ ಕೆಲಸ ಮಾಡಿದ ರವೀಂದ್ರಗೆ ಯಾವ ಅರ್ಹತೆಯಿಲ್ಲ ಎಂದು ಪಾಂಡವಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದರು.
ಕಾಂಗ್ರೆಸ್ ನಲ್ಲಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಲುವರಾಯಸ್ವಾಮಿ ಅವರನ್ನು ಸೋಲಿಸಲು ಸಂಚು ರೂಪಿಸಿದ್ದರು. ಚಲುವರಾಯಸ್ವಾಮಿ ಅವರನ್ನು ಕೆಂಬುತಕ್ಕೆ ಹೋಲಿಸುವ ನೀವು ಏ.26ರ ಬಳಿಕ ಯಾರು ನವಿಲು, ಯಾರು ಕೆಂಬುತ ಎಂಬುದು ಗೊತ್ತಾಗುತ್ತದೆ. ನಿಮಗೆ ಕಾಂಗ್ರೆಸ್ ಪದವೀಧರ ಕ್ಷೇತ್ರ ಟಿಕೆಟ್ ನೀಡಿತ್ತು. 3ನೇ ಸ್ಥಾನಕ್ಕೆ ಹೋದರೂ ಪಕ್ಷ ದೊಡ್ಡ ಮೇದಾವಿ ಎಂದು ತಿಳಿದು ಉನ್ನತ ಸ್ಥಾನಮಾನ ನೀಡಿದ ಪಕ್ಷದ ನಾಯಕರಿಗೆ ನಿಮ್ಮ ಬಗ್ಗೆ ಅರಿವಾಗಬೇಕಿದೆ ಎಂದರು.
ಮೈತ್ರಿ ಅಭ್ಯರ್ಥಿ ಸ್ವಾರ್ಥಕ್ಕಾಗಿ ಸ್ಪರ್ಧೆ ಅಲ್ಲ, ಜಿಲ್ಲೆ ಸಮಸ್ಯೆ ಬಗೆಹರಿಸಲು ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಿದ್ದೇನುವ ಅವರಿಗೆ ಈವರೆಗೆ ಜಿಲ್ಲೆ ಸಮಸ್ಯೆ ಗೊತ್ತಿರಲಿಲ್ಲವೇ, ಕೇವಲ ಚುನಾವಣೆ ಸಮಯದಲ್ಲೇ ನೆನಪಾಗಲಿದೆಯೇ ಎಂದು ಛೇಡಿಸಿದರು.
ಈಗಾಗಲೇ ಜೆಡಿಎಸ್ ಗೆ ಜಿಲ್ಲೆ ಜನ ಪಾಠ ಕಲಿಸಿದ್ದು, ಜಿಲ್ಲೆಯ ಒಕ್ಕಲಿಗನೊಬ್ಬ ಪ್ರಭಾವಿ ಮಂತ್ರಿಯಾಗಿ ಬೆಳೆಯುತ್ತಿರುವುದರಿಂದ ಈ ಸೇಡು ತೀರಿಸಿಕೊಳ್ಳಲು ಹೆಣೆಯುತ್ತಿರುವ ರಾಜಕಾರಣವೇ ಹೊರತು ಜಿಲ್ಲೆಯ ಅಭಿವೃದ್ಧಿಗಾಗಿ ಮಾಜಿ ಸಿಎಂ ಸ್ಪರ್ಧೆ ಖಂಡಿತವಾಗಿಯೂ ಇಲ್ಲ ಎಂದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಂತನಹಳ್ಳಿ ಬಸವರಾಜು, ಲೋಕೇಶ್ (ರಾಜೇಶ್), ಪಿಎಲ್ ಡಿ ಬ್ಯಾಂಕ್ ನಾಮ ನಿರ್ದೇಶಕ ಚಿನಕುರಳಿ ಚಂದ್ರಶೇಖರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ, ರೈತಸಂಘದ ಮುಖಂಡ ನಾಗೇಶ್ ಇತರರಿದ್ದರು.