ಶಾಲೆಗೆ ತೆರಳುವಾಗ ಸ್ಕೂಟರ್ ಗೆ ಅಡ್ಡಬಂದಳು ಎಂಬ ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಬ್ಬಳ ಮೇಲೆ ವ್ಯಕ್ತಿಯೊಬ್ಬ ಅಮಾನವೀಯವಾಗಿ ಹಲ್ಲೆ ನಡೆಸಿದ ರಮೇಶ್ ಎಂಬ ವ್ಯಕ್ತಿಯ ಮೇಲೆ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
13 ವರ್ಷದ ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ IPC 1860 (U/s-341,323,354); Juvenile Justice (Care and Protection of Children) Act, 2015 (U/s-7 ದೂರು ದಾಖಲಿಸಿಕೊಳ್ಳಲಾಗಿದೆ.
ದೂರಿನ ಸಾರಾಂಶ
ನನ್ನ ಮಗಳು ಸೈಕಲ್ ನಲ್ಲಿ ಹೋಗುವಾಗ ಅದೇ ವೇಳೆಗೆ ಮೋಟಾರು ಬೈಕ್ ಸಂಖ್ಯೆ ಕೆಎ-11 ಇಡಬ್ಲ್ಯೂ – 4842ರ ಗಾಡಿಯಲ್ಲಿ ಬರುತ್ತಿದ್ದ ರಮೇಶ ಎಂಬುವವರು 13 ವರ್ಷದ ನನ್ನ ಮಗಳು, ಅಡ್ಡ ಬಂದಳು ಎಂಬ ಕಾರಣಕ್ಕೆ ಏಕಾಏಕಿ ನನ್ನ ಮಗಳಿಗೆ ಕಪಾಲ ಮೋಕ್ಷ ಮಾಡಿ, ಬಾಯಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ. ‘ನನ್ನ ಮಗಳು ನನಗೆ ಪರೀಕ್ಷೆ ಇದೆ, ನನ್ನದೇನು ತಪ್ಪಿಲ್ಲ ಬಿಡಿ, ಎಂದು ಎಷ್ಟೇ ಬೇಡಿಕೊಂಡರು, ಬಿಡದೇ ಹಲ್ಲೆ ಮಾಡಿರುತ್ತಾರೆ. ನನ್ನ ಮಗಳ ಬಟ್ಟೆಯನ್ನು ಹಿಡಿದು ಎಳೆದಾಡಿ, ಆಕೆ ಒಂದು ಹೆಣ್ಣು ಮಗು ಎಂಬ ಕನಿಕರವಿಲ್ಲದೇ ಶಾಲೆಯ ವಿದ್ಯಾರ್ಥಿನಿಯಾದ ನನ್ನ ಮಗಳಿಗೆ ಹೊಡೆದಿದ್ದಾರೆ. ಹೊಡೆದ ವ್ಯಕ್ತಿಯು ರಮೇಶ್ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ನನ್ನ ಮಗಳಿಂದ ತಿಳಿದುಕೊಂಡು ದೂರು ನೀಡಿದ್ದೇನೆಂದು ಸಂತ್ರಸ್ಥೆ ವಿದ್ಯಾರ್ಥಿನಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ತನ್ನ ಮಗಳ ಮೇಲೆ ಹಲ್ಲೆ ನಡೆಸಿದ ಇವರನ್ನು ಪತ್ತೆ ಮಾಡಿ ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ಧಾರೆ. ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆಸಿದ ರಮೇಶ್ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಗೌರವ ಕಾರ್ಯದರ್ಶಿ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿ ಮೇಲೆ ನಡೆದ ಹಲ್ಲೆಯ ಬಗ್ಗೆ ನುಡಿಕರ್ನಾಟಕ.ಕಾಂ ಕೂಡಲೇ ವರದಿ ಪ್ರಸಾರ ಮಾಡಿತ್ತು, ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡು ಆರೋಪಿ ಮೇಲೆ ಎಫ್ಐಆರ್ ಹಾಕಿರುವುದು ಶ್ಲಾಘನೀಯವಾಗಿದೆ.