ಮಳವಳ್ಳಿ ಪಟ್ಟಣದ ಪುರಸಭೆಯ 2024-25ನೇ ಸಾಲಿನ ಪುರಸಭೆ ಬಜೆಟ್ ಅನ್ನು ಪುರಸಭೆಯ ಆಡಳಿತಾಧಿಕಾರಿ ಬಿ.ಆರ್.ಮಹೇಶ್ ಮಂಡಿಸಿದರು.
26.8 ಕೋಟಿ ಆದಾಯ ಬರುವ ನಿರೀಕ್ಷೆ ಇದ್ದು, 26 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. 75 ಲಕ್ಷ ಉಳಿತಾಯವಾಗಲಿದೆ. ಅಲ್ಲದೇ ಪಟ್ಟಣದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಪುರಸಭೆ ಬದ್ಧವಾಗಿದೆ ಎಂದು ಬಜೆಟ್ನಲ್ಲಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅವರು ಮಂಡಿಸಿದ ಬಜೆಟ್ನಲ್ಲಿ, ಆಸ್ತಿ ತೆರಿಗೆಯ ಆದಾಯ 1.12 ಕೋಟಿ, ಉದ್ದಿಮೆ ಪರವಾನಗಿಯಿಂದ ಆದಾಯ 15 ಲಕ್ಷ, ನೀರಿನ ದರದಿಂದ 49 ಲಕ್ಷ, ವಾರದ ಸಂತೆಯ ನೆಲಬಾಡಿಗೆ ಆದಾಯ 16 ಲಕ್ಷ, ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ 2 ಕೋಟಿ, ಎಎಫ್ ಸಿ ಅನುದಾನ 1 ಕೋಟಿ, 15ನೇ ಹಣಹಾಸು ಆಯೋಗದ ಅನುದಾನ 2 ಕೋಟಿ, ಎಸ್ ಎಫ್ ಸಿ ವೇತನ ಅನುದಾನ 3.5 ಕೋಟಿ, ಸ್ವೀಕೃತಗೊಂಡ ಎಸ್ ಎಫ್ ಸಿ ವಿದ್ಯುತ್ಚ್ಛಕ್ತಿ 1 ಕೋಟಿ ಸೇರಿದಂತೆ 20.99 ಕೋಟಿ ಆದಾಯ ಹಾಗೂ ಆರಂಭ ಶಿಲ್ಕು 58 ಲಕ್ಷ ಉಳಿಕೆಯೊಂದಿಗೆ 26.8 ಕೋಟಿಯ ನಿರೀಕ್ಷೆ ಇದೆ.
ಸದಸ್ಯ ಟಿ.ನಂದಕುಮಾರ್ ಮಾತನಾಡಿ, ಬಜೆಟ್ ಪ್ರತಿಯಲ್ಲಿ ಹೆಚ್ಚಿನ ಇಂಗ್ಲೀಷ್ ಪದ ಬಳಕೆ ಸರಿಯಲ್ಲ, ಅಲ್ಲದೇ ಕಳೆದ ಹಲವು ವರ್ಷಗಳಿಂದ ಕೋತಿ, ಬೀದಿ ನಾಯಿಗಳ ಹಾವಳಿ ತಡೆಯಲು ಆಗ್ರಹಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಬಾರಿಯಾದರೂ ಕ್ರಮ ವಹಿಸಬೇಕು. ಹಾಗೂ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 3 ಲಕ್ಷ ರೂ.ಮೀಸಲಿಡಬೇಕು. ಒತ್ತುವರಿಯಾಗಿರುವ ಸಾರ್ವಜನಿಕ ಸ್ಮಶಾನದ ಜಾಗವನ್ನು ತೆರವು ಮಾಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಎಂ.ಎನ್.ಶಿವಸ್ವಾಮಿ ಮಾತನಾಡಿ, ನ್ಯಾಯಾಲಯಗಳಲ್ಲಿ ಆಸ್ತಿಗಳ ಸಂಬಂಧ ಪುರಸಭೆ ಪರವಾಗಿ ಹಲವು ತೀರ್ಪುಗಳು ಬಂದಿದ್ದು, ಅವುಗಳನ್ನು ವಶಕ್ಕೆ ಪಡೆಯಲು ಕ್ರಮ ವಹಿಸಬೇಕು ಎಂದರು.
ಸದಸ್ಯ ನೂರುಲ್ಲಾ ಮಾತನಾಡಿ, ಐತಿಹಾಸಿಕ ಸಿಡಿಹಬ್ಬ ಆಚರಣೆಗೆ ಹೆಚ್ಚುವರಿ ಹಣ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಸದಸ್ಯರಾದ ಪುಟ್ಟಸ್ವಾಮಿ, ರಾಧಾ ನಾಗರಾಜು, ಬಸವರಾಜು, ಸಿದ್ದರಾಜು, ಇಂದ್ರಮ್ಮ ದೊಡ್ಡಯ್ಯ, ಸವಿತಾ, ಮಹೇಶ್ವರಿ, ಎಂ.ಆರ್.ರಾಜಶೇಖರ್, ಭಾಗ್ಯಮ್ಮ, ಮಣಿ, ಆತೀಯಾ ಬೇಗಂ, ರವಿ, ನಾಗೇಶ್ ಇದ್ದರು.