ಮನುಷ್ಯನ ಮಾನಸಿಕ ಶಾಂತಿ ಮತ್ತು ನೆಮ್ಮದಿಗೆ ಇಷ್ಟ ದೇವರಿಗೆ ಪೂಜೆ,ಪ್ರಾರ್ಥನೆ ಸಲ್ಲಿಸುವುದು ಅಗತ್ಯ ಎಂದು ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ, ಯುವನಾಯಕ ಇಂಡುವಾಳು ಸಚ್ಚಿದಾನಂದ ಹೇಳಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನಕೊಪ್ಪಲು ಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಪ್ರಸನ್ನ ನಂಜುಂಡೇಶ್ವರ ಹಾಗೂ ಪಾರ್ವತಿ ಅಮ್ಮನವರ ದೇವಾಲಯದ ಅಭಿವೃದ್ಧಿಗೆ ಗುರುವಾರ ರೂ.1 ಲಕ್ಷ ವೈಯಕ್ತಿಕ ನೆರವು ನೀಡಿ ಅವರು ಮಾತನಾಡಿದರು.
ಇಂದು ಜನರು ಒತ್ತಡದಲ್ಲಿ ಜೀವನ ಮಾಡುತ್ತಿದ್ದಾರೆ.ಇಂತಹ ಒತ್ತಡದ ಸಂದರ್ಭದಲ್ಲಿ ಮನುಷ್ಯ ನೆಮ್ಮದಿಗಾಗಿ ದೇವಸ್ಥಾನಕ್ಕೆ ತೆರಳಿ ಪೂಜೆ,ಪುನಸ್ಕಾರ ಸಲ್ಲಿಸಿದರೆ ಆತನ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ದೇವರ ಮೇಲಿನ ನಂಬಿಕೆ ಮತ್ತು ಶ್ರದ್ದೆಯಿಂದ ಜೀವನದಲ್ಲಿ ತಪ್ಪುಗಳು ಕಡಿಮೆಯಾಗುತ್ತವೆ. ಸನ್ಮಾರ್ಗದಲ್ಲಿ ನಡೆಯಲು ನಮಗೆ ಪ್ರೇರಣೆ ಸಿಗುತ್ತದೆ ಎಂದು ಅವರು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಎಸ್.ಎಲ್. ಲಿಂಗರಾಜು, ತಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್. ಸಂದೇಶ್, ಮಾಜಿ ಸದಸ್ಯ ರಾಮಲಿಂಗೇಗೌಡ, ಯಜಮಾನ್ ಜವರೇಗೌಡ, ನಾಗರಾಜು, ಬಿಜೆಪಿ ಮುಖಂಡ ಎಸ್. ದೇವರಾಜು, ಗ್ರಾ.ಪಂ. ಸದಸ್ಯರಾದ ರೂಪಾ ಪ್ರಭಾಕರ್, ಉದ್ಯಮಿ ಶಶಿಕುಮಾರ್ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.