ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ವಿಷಯದ ಬಗ್ಗೆ ಮಹಿಳೆಯರು ಹೋರಾಟ ನಡೆಸಬೇಕಿದ್ದರೆ, ಮೊದಲು ಸಮಾಜವನ್ನು ಅರ್ಥೈಹಿಸಿಕೊಳ್ಳಬೇಕೆಂದು ವಿಮೋಚನ ಮಹಿಳಾ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಸೇಲಿನ್ ತಿಳಿಸಿದರು.
ವಿಮೋಚನ ಮಹಿಳಾ ಹಕ್ಕುಗಳ ವೇದಿಕೆ ಮಂಡ್ಯ ಶಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಂಡ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡಿಯಾಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶ್ರೀರಂಗ ಪಟ್ಟಣ ತಾಲ್ಲೂಕು ಇವರ ಸಂಯುಕ್ತಾಶ್ರಯದಲ್ಲಿ ಕೊಡಿಯಾಲ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿ ನಡೆದ ”ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ” ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ನಾವು, ನಮಗೆ ಸರಿ ಅನಿಸಿದ್ದನ್ನು ಮಾಡಲು ಹಾಗೂ ಬದುಕಲು ಸಾಧ್ಯವಿಲ್ಲ, ಮಹಿಳೆಯರು ನಾವು ನಮ್ಮ ಮನಸ್ಸಿಗೆ ಸರಿ ಅನಿಸಿದ್ದನ್ನು ಪಡೆದುಕೊಳ್ಳಲು ಹಾಗೂ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೊರಾಟ ಮಾಡಬೇಕಾಗಿದೆ ಎಂದರು.
ವೈದ್ಯಾಧಿಕಾರಿ ಹೇಮಾಲತಾ ಮಾತನಾಡಿ, ಕರ್ನಾಟಕದಲ್ಲಿ 1000 ಗಂಡು ಮಕ್ಕಳಿಗೆ 943 ಹೆಣ್ಣು ಮಕ್ಕಳಿದ್ದು, ಪ್ರತಿ ಸಾವಿರ ಗಂಡಸರ ಜನಸಂಖ್ಯೆಗೆ ಸರಿಸಮಾನವಾದ ಹೆಣ್ಣು ಜನಸಂಖ್ಯೆ ಇಲ್ಲದಿದ್ದರೆ, ಉಂಟಾಗುವ ತೊಂದರೆಗಳ ಬಗ್ಗೆ ನಾವು ಚಿಂತಿಸಬೇಕು, ನಮ್ಮ ಕರ್ನಾಟಕದಲ್ಲಿ ಹೆಣ್ಣುಮಕ್ಕಳಿಗೆ ಸರಿಸಮಾನವಾದ ಸ್ಥಾನಮಾನ ಸಿಗುತ್ತಿಲ್ಲ ಎಂದರು.
ಗಂಡು ಮಗುಬೇಕೆಂದು ನಿರೀಕ್ಷಿಸುತ್ತಿರುವ ಗರ್ಭೀಣಿ ಮಹಿಳೆಯರಿದ್ದು, ನಮ್ಮ ಮೇಲೆ ನಮಗೆ ಅಭಿಮಾನವಿಲ್ಲದಿದ್ದರೆ, ನಾವು ಹೇಗೆ ಸಮಾಜಕ್ಕೆ ಕೊಡುಗೆ ಕೊಡಲು ಸಾಧ್ಯವಾಗುತ್ತದೆ ? ಹೆಣ್ಣಿಂದರೆ ಎಲ್ಲರಿಗೂ ಕೀಳರಿಮೆ, ಭೇದಭಾವ ಇದ್ದು, ಇದು ದೂರವಾಗಬೇಕೆಂದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ವೆಂಕಟೇಶ್, ಮೋಹನ್, ಹೇಮಲತಾ, ಹಿರಿಯ ಸಹಾಯಕ ಆರೋಗ್ಯ ಅಧಿಕಾರಿ ಪುಷ್ಪ, ವೃತ್ತ ಮೇಲ್ವಿಚಾರಕಿ ಸುಜಾತ, ವಿಮೋಚನ ಜರ್ನಾಧನ್, ಇಂಪನ ಹಾಗೂ ಗರ್ಭಿಣಿ ಮಹಿಳೆಯರು, ಆಶಾಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಭಾಗವಹಿಸಿದರು.