Thursday, May 16, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ| ಮೂವರಿಗೆ ಜೀವಾವಧಿ ಶಿಕ್ಷೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಪ್ರದೇಶದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪರಾಧಿಗಳಿಗೆ ಜೀವಾವಧಿ ಜೈಲುಶಿಕ್ಷೆ ವಿಧಿಸಿ ಮಂಡ್ಯದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ಜಿಲ್ಲೆಯ ಕೆ.ಆರ್‌.ಮಿಲ್‌ ಕಾಲೋನಿ ನಿವಾಸಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಬಿ.ಎ. ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗಳಾದ ಕೀರ್ತಿ ಆಲಿಯಾಸ್ ಕೀರ್ತಿಗೌಡ, ಕಿರಣ ಆಲಿಯಾಸ್ ಕಿರಣ್‌ ಗೌಡ, ಮೋಹನ್  ಜೀವಾವಧಿ ಶಿಕ್ಷೆಗೆ ಗುರಿಯಾದವರು. ಇವರಿಗೆ 2.80 ಲಕ್ಷ ರೂ. ದಂಡ ವಿಧಿಸಲಾಗಿದೆ. ಸಾಕ್ಷಾಧಾರ ಕೊರತೆಯಿಂದ ಮತ್ತೊಬ್ಬ ಆರೋಪಿ ಮಂಜುನಾಥ್ ಆರೋಪ ಮುಕ್ತಗೊಂಡಿದ್ದಾನೆ.

ಸಂತ್ರಸ್ಥೆ ವಿದ್ಯಾರ್ಥಿನಿ ಪರವಾಗಿ ವಾದ ಮಂಡಿಸಿದ ವಕೀಲರಾದ ರಾಮಲಿಂಗಯ್ಯ ನೇತೃತ್ವದ ತಂಡ

ಘಟನೆ ವಿವರ

ಮೈಸೂರಿನಲ್ಲಿ 2015 ರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡು ಕೆ ಆರ್ ಎಸ್, ಮೇಲುಕೋಟೆ, ಕರಿಘಟ್ಟ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸುತ್ತಾಡಿ ಪ್ರೀತಿ – ವಿಶ್ವಾಸ ಪಡೆದಿದ್ದ ಕೀರ್ತಿ ಅಲಿಯಾಸ್ ಕೀರ್ತಿ ಗೌಡ, 2015 ನೇ ಅಕ್ಟೋಬರ್ 9 ರಂದು ಕಾಲೇಜಿನ ಹತ್ತಿರ ಹೋಗಿ ವಿದ್ಯಾರ್ಥಿನಿಯನ್ನು ಕೆಆರ್‌ಎಸ್‌ ಗೆ ಹೋಗೋಣ ಎಂದು ಬೈಕ್ ನಲ್ಲಿ ಕೂರಿಸಿಕೊಂಡು ತೆರಳಿದ್ದ. ನಂತರ ಶ್ರೀರಂಗಪಟ್ಟಣ ಪಂಪ್ ಹೌಸ್ ಹತ್ತಿರದ ಡಾಬಾದಲ್ಲಿ ಊಟ ಮಾಡಿದ್ದರು.

ಆನಂತರ ಕೆ ಆರ್ ಎಸ್ ಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಬೇಬಿಬೆಟ್ಟದ ತಪ್ಪಲಿಗೆ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದರು. ಅದೇ ಸ್ಥಳದಲ್ಲಿ ಈತನ ಸ್ನೇಹಿತರಾದ ಕಿರಣ ಅಲಿಯಾಸ್ ಕಿರಣ್ ಗೌಡ, ಮೋಹನ ಕೂಡ ಸಂತ್ರಸ್ತೆ ಮೇಲೆ ಅತ್ಯಾಚಾರವೆಸಗಿದ್ದು, ಸಂತ್ರಸ್ತೆ ಅಳುವು ಹೆಚ್ಚಾದಾಗ ಮಂಜುನಾಥ್ ಸುಮ್ಮನಾಗಿದ್ದು. ಅನಂತರ ನಾಲ್ವರು ಸಂತ್ರಸ್ತೆಯನ್ನು ಶ್ರೀರಂಗಪಟ್ಟಣದ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಬಿಟ್ಟು ಪರಾರಿಯಾಗಿದ್ದರು.

ಸಂತ್ರಸ್ತೆಯು ಅ.10 ರಂದು ಪಾಂಡವಪುರ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಆಗಿನ  ಶ್ರೀರಂಗಪಟ್ಟಣ ಉಪವಿಭಾಗದ ಡಿ.ವೈ.ಎಸ್.ಪಿ ಎನ್.ಸಿದ್ದೇಶ್ವರ್ ಆರೋಪಿಗಳ ವಿರುದ್ಧ ಮಂಡ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ನಂತರ ಈ ಮೊಕದ್ದಮೆಯು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆ ಯಾಗಿತ್ತು.

ವಿಚಾರಣೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೀರ್ತಿ ಆಲಿಯಾಸ್ ಕೀರ್ತಿಗೌಡ, ಕಿರಣ್ ಅಲಿಯಾಸ್ ಕಿರಣ್‌ ಗೌಡ ಮತ್ತು ಮೋಹನ್ ಅವರಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಯ್ದೆಯಡಿ ಜೀವಾವಧಿ ಶಿಕ್ಷೆ ಮತ್ತು ತಲಾ ರೂ.50,000 ದಂಡ, ಪಿ.ಓ.ಎ ಕಾಯ್ದೆಯಡಿ ಕಠಿಣ ಶಿಕ್ಷೆ ಮತ್ತು ಭಾದಂಸಂ ಕಲಂ 376 ಡಿ ಅಡಿಯಲ್ಲಿ ಇಪ್ಪತ್ತು ವರ್ಷ ಕಠಿಣ ಶಿಕ್ಷೆ ಮತ್ತು ರೂ.40,000 ದಂಡ ಹಾಗೂ ಭಾದಂಸಂ ಕಲಂ 506 ರಡಿಯಲ್ಲಿ ರೂ.5,000 ದಂಡ ಮತ್ತು ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ನಿರ್ಮಲ ತೀರ್ಪು ನೀಡಿದ್ದಾರೆ.

ಇದೇ ವೇಳೆ ನೊಂದ ಸಂತ್ರಸ್ತೆಗೆ 2,80,000 ರೂ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಹೆಚ್.ಸಿ.ರಾಮಲಿಂಗೇಗೌಡ ವಾದ ಮಂಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!