ಕೆ.ಆರ್.ಪೇಟೆ ಕ್ಷೇತ್ರದ ಜನತೆ ಸೇವೆ ಮಾಡಲು ನನಗೆ ಒಂದು ಸುವರ್ಣ ಅವಕಾಶ ನೀಡಿದ್ದೀರಿ, ಅವಕಾಶವನ್ನು ಸಮರ್ಪಕವಾಗಿ ಕಾಯ, ವಾಚ, ಮನಸ್ಸಿನಿಂದ ಪಕ್ಷ ಬೇಧ ಮರೆತು, ಹಿರಿಯರ ಸಲಹೆ ಪಡೆದು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೂತನ ಶಾಸಕ ಹೆಚ್. ಟಿ. ಮಂಜು ಹೇಳಿದರು.
ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ, ಆಲೆನಹಳ್ಳಿ, ಮೂಡನಹಳ್ಳಿ, ನಂದೀಪುರ, ಬೀರುವಳ್ಳಿ, ನಟನಹಳ್ಳಿ, ಬಿಕನಹಳ್ಳಿ, ಚೌಡಸಮುದ್ರ, ಮಂಚಿಬೀಡು, ಸಾಕ್ಷಿಬಿಡು ಮುಂತಾದ ಗ್ರಾಮಗಳಲ್ಲಿ ಮತದಾರರಿಗೆ ಕೃತಜ್ಞತೆ ತಿಳಿಸಿ ಮಾತನಾಡಿದ ಅವರು, ಯಾವುದೇ ಹಣ ಆಮಿಷಕ್ಕೆ ಮತ್ತು ವದಂತಿಗಳಿಗೂ ಕಿವಿ ಕೊಡದೆ, ಸಾಮಾನ್ಯ ರೈತ ಕುಟುಂಬದಿಂದ ಬಂದ ತಮ್ಮನ್ನು ಆರಿಸಿದ್ದಕ್ಕೆ ಕೃತಜ್ಞತೆ ಹೇಳಿದರು.
ಅತಿ ಹೆಚ್ಚು ಮತಗಳ ನೀಡಿ ಸೇವೆ ಮಾಡಲು ಅವಕಾಶ ನೀಡಿದ್ದೀರಿ, ಆ ನಂಬಿಕೆಗೆ ಕಪ್ಪು ಚುಕ್ಕೆ ಬಾರದಂತೆ ನನ್ನ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ದ್ವೇಷ ರಾಜಕಾರಣಕ್ಕೆ ಆದ್ಯತೆ ನೀಡದೆ, ತಾಲೂಕಿನ ಹಿರಿಯರು ಮತ್ತು ನಿಮ್ಮೆಲ್ಲರ ಸಲಹೆ ಪಡೆದು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಪ್ರಾಮಾಣಿಕವಾಗಿ ದುಡಿಯುವ ಮೂಲಕ ನಿಮ್ಮ ಋಣ ತೀರಿಸುತ್ತೇನೆ ಎಂದರು.
ವೀರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್ ಮಾತನಾಡಿ, ಕೆಲ ರಾಜಕಾರಣಿಗಳು ಚುನಾವಣೆ ಮುಗಿದ ನಂತರ ಐದು ವರ್ಷಗಳ ಕಾಲ ಮತದಾರರನ್ನೇ ಮರೆಯುತ್ತಾರೆ. ಆದರೆ ಗೆಲುವು ಸಾಧಿಸಿದ್ದ ಕೆಲವೇ ದಿನಗಳಲ್ಲಿ ನೂತನ ಶಾಸಕರು ಮೊದಲು ನನ್ನ ಗೆಲುವಿಗೆ ಕಾರಣರಾದ ಮತದಾರರಿಗೆ ಕೃತಜ್ಞತೆ ತಿಳಿಸಬೇಕು ಎಂದು ಬಂದಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಅಕ್ಕಿಹೆಬ್ಬಾಳು ರಘು, ಹೋಬಳಿ ಅಧ್ಯಕ್ಷ ಬಸವಲಿಂಗಪ್ಪ, ಜೆಡಿಎಸ್ ಹಿರಿಯ ಮುಖಂಡ ಶ್ರೀನಿವಾಸ್, ಬಿರುವಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈರೇಗೌಡ, ಚೌಡಸಮುದ್ರ ರುದ್ರಪ್ಪ, ಗ್ರಾ. ಪಂ.ಸದಸ್ಯ ಮಂಜೇಗೌಡ, ನಟನಹಳ್ಳಿ ದಿಲೀಪ್, ಮಂಜುನಾಥ್, ರಾಮೇಗೌಡ, ಪ್ರತಾಪ್, ಸುನಿಲ್, ನಾಗರಾಜು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.