-
ಅಮಾನವೀಯ ಪೊಲೀಸರ ವಿರುದ್ಧ ಕ್ರಮಕ್ಕೆ ಡಿಜಿಪಿಗೆ ಮನವಿ
- ಎಲ್ಲೆಂದರಲ್ಲಿ ದಂಡ ವಸೂಲಿಗೆ ಬ್ರೇಕ್ ಹಾಕಲು ಒತ್ತಾಯ
ಮಂಡ್ಯ ಜಿಲ್ಲೆಯಲ್ಲಿ ಸಂಚಾರಿ ನಿಯಮಗಳ ಹೆಸರಿನಲ್ಲಿ ಸಂಚಾರಿ ಪೊಲೀಸರು ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡಿ ದಂಡ ವಸೂಲಿ ಮಾಡುತ್ತಿದ್ದು, ಇತ್ತಿಚೇಗೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಯಗುಚಗುಪ್ಪೆ ಗ್ರಾಮದ ದಂಪತಿಗಳೊಂದಿಗೆ ಸಂಚಾರಿ ಪೊಲೀಸರು ಅಮಾನವೀಯವಾಗಿ ನಡೆದು ಕೊಂಡಿದ್ದು ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಡಿಜಿಪಿ ಪ್ರವೀಣ್ ಸೂದ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಹಸುಗೂಸಿನ ದಂಪತಿಗಳೊಂದಿಗೆ ಸಂಚಾರಿ ಪೊಲೀಸರು ನಿಷ್ಕರುಣೆಯಿಂದ ನಡೆದುಕೊಂಡಿದ್ದಾರೆ, ಇಂತಹ ಪೊಲೀಸ್ ಸಿಬ್ಬಂದಿ ಮೇಲೆ ತುರ್ತು ಕ್ರಮವಹಿಸಬೇಕು. ಹೆಲ್ಮೆಟ್ ಧರಿಸಿಲ್ಲವೆಂಬ ಒಂದೇ ಕಾರಣಕ್ಕೆ ಸ್ಥಳದಲ್ಲಿದ್ದ ಸಂಚಾರಿ ಪೊಲೀಸರು ದ್ವಿಚಕ್ರ ವಾಹನ ಸವಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಸ್ಥಳದಲ್ಲಿಯೇ ದಂಡ ಕಟ್ಟಿ ವಾಹನ ತೆಗೆದುಕೊಂಡು ಹೋಗುವಂತೆ ಆದೇಶಿಸಿರುವುದು ಸರಿಯಲ್ಲ. ದಂಡದ ಮೊತ್ತವನ್ನು ಪಾವತಿಸುವವರೆಗೂ ಹಸುಗೂಸು ಮತ್ತು ಬಾಣಂತಿಯನ್ನು ರಸ್ತೆಯ ಬದಿಯಲ್ಲಿ ಮಳೆಯಲ್ಲೇ ಕೂರಿಸಿಕೊಂಡಿದ್ದು, ದಂಡ ಪಾವತಿಸಿದ ನಂತರ ಅವರನ್ನು ಕಳುಹಿಸಿರುವುದು ಅಮಾನವೀಯ ಕೃತ್ಯವಾಗಿರುತ್ತದೆ ಎಂದು ಅವರು ವಿವರಿದ್ದಾರೆ.
ಸ್ಥಳೀಯ ನಾಗರೀಕರು ಹಾಗೂ ಸಾರ್ವಜನಿಕರು ಆ ಪೊಲೀಸ್ ಅಧಿಕಾರಿಯ ಬಳಿ ಎಷ್ಟೇ ಬೇಡಿಕೊಂಡರೂ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸದಿರುವ ಪೊಲೀಸರ ಮೇಲೆ ಕಾನೂನು ಕ್ರಮ ಜರುಗಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.