ವರದಿ : ಅನುಪಮಾ ಸತೀಶ್
ಮುಂಬರುವ ವಿಧಾನಸಭ:ಆ ಚುನಾವಣೆಯಲ್ಲಿ ಕದಲೂರು ಉದಯ್ ಅವರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವಂತೆ ತಪ್ಪಿದಲ್ಲಿ ಪಕ್ಷೇತರರಾಗಿ ಸ್ಪರ್ಧೆಗಿಳಿಯುವಂತೆ ಒತ್ತಾಯಿಸಿ ಬೆಂಬಲಿಗರು ಒಕ್ಕೊರಲಿನ ನಿರ್ಣಯ ಅಂಗೀಕರಿಸಿದರು.
ಮದ್ದೂರು ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಕೆ.ಎಂ.ಉದಯ್ ಅಭಿಮಾನಿಗಳು, ಹಿತೈಷಿಗಳು ಮತ್ತು ಮಹಿಳಾ ಕಾರ್ಯಕರ್ತರು ಮದ್ದೂರು ಪಟ್ಟಣದಲ್ಲಿ ಸಭೆ ಸೇರಿ ಈ ತೀರ್ಮಾನ ಕೈಗೊಂಡರು. ಕದಲೂರು ಉದಯ್ ಅಭಿಮಾನಿ ಬಳಗದ ಸದಸ್ಯರಿಂದ ಸಭೆಯು ಆಯೋಜನೆಗೊಂಡಿತ್ತು.
ಕಳೆದ ವಾರವಷ್ಟೇ ತಮ್ಮ ಬೆಂಗಲಿಗರ ಸಭೆ ವೇಳೆ ಮುಂದಿನ ವಿಧಾನಸಭಾ ಚುನಾವಣೆ ವೇಳೆ ಸ್ಪರ್ಧಿಸುವ ಅದರಲ್ಲೂ ರಾಷ್ಟ್ರೀಯ ಪಕ್ಷವೊಂದರ ಚಿಹ್ನೆಯೊಡನೆ ಕಣಕ್ಕಿಳಿಯುವುದಾಗಿ ಘೋಷಿಸಿದ್ದ ಉದಯ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಅದ್ಯಕ್ಷ ಕೆ.ಎಂ. ಉದಯ್ ಅವರ ಮಾತಿಗೆ ಇಂದಿನ ಸಭೆ ಮತ್ತಷ್ಟು ಪುಷ್ಠಿ ನೀಡುವಂತಿತ್ತು.
ಒಂದೆಡೆ ಮದ್ದೂರು ಪಟ್ಟಣದಲ್ಲಿ ಪ್ರಜಾಧ್ವನಿ ಯಾತ್ರೆ ಕೂಗು ಕೇಳಿ ಬರುವ ಜತೆಗೆ ಕೇಂದ್ರ ಮತ್ತು ರಾಜ್ಯಮಟ್ಟದ ಕಾಂಗ್ರೆಸ್ ಧುರೀಣರು, ಸ್ಥಳೀಯ ಮುಖಂಡರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಅದೆ ಸಮಯದಲ್ಲಿ ನಡೆದ ಉದಯ್ ಅಭಿಮಾನಿಗಳ ಸಭೆಯಲ್ಲಿಯೂ ಸಾವಿರಾರು ಮಂದಿ ಪಾಲ್ಗೊಂಡಿದ್ದು, ಅಚ್ಚರಿಗೆ ಕಾರಣವಾಯಿತು.
ಅಭಿಮಾನಿಗಳ ಒತ್ತಾಯದ ಮೇರೆಗೆ ಕಾರ್ಯಕ್ರಮ ವೇದಿಕೆಗೆ ಆಗಮಿಸಿದ ಸಮಾಜ ಸೇವಕ ಕೆ.ಎಂ. ಉದಯ್ ಸಭೆಯಲ್ಲಿದ್ದ ಮುಖಂಡರು, ಹಿತೈಷಿಗಳ ತೀರ್ಮಾನಕ್ಕೆ ಬದ್ಧರಾಗುವ ಕುರಿತಾಗಿ ಮುಂದಿನ ನಾಲ್ಕು ದಿನ ಅವಕಾಶ ನೀಡುವಂತೆ ಕೋರಿದರು.
ಸಭೆಯಲ್ಲಿ ಗೆಜ್ಜಲಗೆರೆ ಗ್ರಾ.ಪಂ.ಅಧ್ಯಕ್ಷ ಹರೀಶ್, ಮದ್ದೂರು ಪುರಸಭೆ ಸದಸ್ಯ ಮನೋಜ್ ಕುಮಾರ್, ಗ್ರಾ.ಪಂ. ಸದಸ್ಯ ಮಧುಕುಮಾರ್, ತಿಮ್ಮಪ್ಪ, ಸಿಪಾಯಿ ಶ್ರೀನಿವಾಸ್ ಇತರರಿದ್ದರು.