ನಮ್ಮ ನಾಡು ಶ್ರೀಗಂಧದ ಬೀಡು, ಕರುನಾಡು, ಎಂಬೆಲ್ಲ ಪದಗಳಿಂದ ಕರೆಯಲ್ಪಡುತ್ತದೆ, ಹಚ್ಚ ಹಸಿರಿಂದ ಕಂಗೊಳಿಸುತ್ತಿರುವ ಬೆಟ್ಟ ಗುಡ್ಡಗಳು, ನದಿಗಳು, ಸಾಧು, ಸಂತರು, ಶಿವಶರಣರು, ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡನಾಡು ಎಂಬ ಹೆಸರೇ ದಿವ್ಯಶಕ್ತಿಯಾಗಿದೆ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಹೇಳಿದರು.
ಮಂಡ್ಯ ನಗರದಲ್ಲಿರುವ ನಗರಸಭೆ ಆವರಣದಲ್ಲಿ ನಗರಸಭೆ ಕಾರ್ಯಾಲಯ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಧ್ವಜರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಇಂತಹ ನಾಡಿನಲ್ಲಿ ಹುಟ್ಟಿದಂತವರೇ ಧನ್ಯರು, ನ.1ರಂದು ಜನರೆಲ್ಲಾ ಸೇರಿ ನಾವೆಲ್ಲಾ ಒಂದು, ಕನ್ನಡರಿಗೆಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಿ, ಸಂಭ್ರಮಿಸುತ್ತಿರುವ ಸುದಿನವಾಗಿದೆ. ನಾಲಗೆಯಲ್ಲಿರಲಿ ಸಾವಿರ ಭಾಷೆಗಳು, ಆದರೆ ಹೃದಯದಲ್ಲಿರಲಿ ಕನ್ನಡಭಾಷೆ ಎಂದು ಹೇಳಿದರು.
ಕನ್ನಡ ನಾಡಿನ ಜನತೆ ಮತ್ತು ನಗರವ್ಯಾಪ್ತಿಯ ನಾಗರೀಕರಿಗೆ 67ನೇ ಕನ್ನಡ ರಾಜ್ಯೋತ್ಸವ ಶುಭತರಲಿ, ಕರ್ನಾಟಕದ ಏಕೀಕರಣದ ಚಳವಳಿಯನ್ನು ಆಲೂರು ವೆಂಟಕರಾಯರು ಪ್ರಾರಂಭಿಸಿದರು. 1956 ನ.1ರಂದು ಮದ್ರಾಸ್, ಹೈದರಾಬಾದ್ ಹಾಗೂ ಮುಂಬೈ ಪ್ರಾಂತ್ಯದಲ್ಲಿದ್ದ ಕನ್ನಡರಿಗರನ್ನು ಒಗ್ಗೂಡಿ ಮೈಸೂರು ರಾಜ್ಯವಾಗಿ ಉದಯವಾಯಿತು, ನಂತರ ಉತ್ತರ ಕರ್ನಾಟಕ ಜನರನ್ನು ಸಂಘಟಿಸಿ, ಕರ್ನಾಟಕ ರಾಜ್ಯವೆಂದು ಮರು ನಾಮಕರಣಗೊಂಡಿತು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ, ದೀಪನಮನ ಸಲ್ಲಿಸಲಾಯಿತು. ನಗರಸಭಾ ಸದಸ್ಯ, ಗಾಯಕ ಶ್ರೀಧರ್ ಮತ್ತು ಸದಸ್ಯರು ಕನ್ನಡ ಗೀತೆಗಳನ್ನು ಹಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಇಶ್ರತ್ ಫಾತೀಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಪುಟ್ಟಸ್ವಾಮಿ, ನಗರಸಭಾ ಸದಸ್ಯರಾದ ಶ್ರೀಧರ್, ಗೀತಾ, ಶ್ರೀನಿವಾಸ್, ನಾಮ ನಿರ್ದೇಶಿತ ಸದಸ್ಯರಾದ ಶಿವಕುಮಾರ್ ಕೆಂಪಯ್ಯ, ಪ್ರಸನ್ನ, ಶಿವಲಿಂಗ, ಪೌರಾಯುಕ್ತ ಆರ್.ಮಂಜುನಾಥ್, ಎಇಇ ರವಿಕುಮಾರ್, ಪರಿಸರ ಅಭಿಯಂತರ ರುದ್ರೇಗೌಡ, ಕಂದಾಯ ಅಧಿಕಾರಿ ಆರ್.ರಾಜಶೇಖರ್, ಮಹದೇವಯ್ಯ, ಸಿಬ್ಬಂದಿ ಭರತ್ ಮತ್ತಿತರರಿದ್ದರು.