ಮಂಡ್ಯ ತಾಲೂಕಿನ ಕಾಳೇನಹಳ್ಳಿ ಬಳಿ ಇರುವ ಅನಿಕೇತನ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಮೈಸೂರು ಹಾಗೂ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಸಹಯೋಗದೊಂದಿಗೆ ಭಾನುವಾರ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಕರ್ನಲ್ ಮನೀಶ್ ಪ್ರಸಾದ್ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ರಾಷ್ಟ್ರ ಪ್ರೇಮವನ್ನು ಮೂಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕು. ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಎನ್ಸಿಸಿ ಘಟಕಗಳನ್ನು ಕಡ್ಡಾಯವಾಗಿ ತೆರೆಯುವ ಮೂಲಕ ಮಕ್ಕಳಲ್ಲಿ ದೇಶ ಭಕ್ತಿಯ ಜೊತೆಗೆ ಶಿಸ್ತು ಬದ್ಧ ಜೀವನವನ್ನು ರೂಪಿಸಲು ಅವಕಾಶ ಕಲ್ಪಿಸಬೇಕು ಎಂದು ಸಲಹೆ ನೀಡಿದರು. ಕಾರ್ಗಿಲ್ ಯುದ್ಧದಲ್ಲಿ ತಾವು ಭಾಗವಹಿಸಿದ ಅನುಭವಗಳನ್ನು ಈ ಸಂದರ್ಭದಲ್ಲಿ ಅವರು ಹಂಚಿಕೊಂಡರು.
ಪತ್ರಕರ್ತ ಅಜಿತ್ ಹನುಮಕ್ಕನವರ್ ಪ್ರಧಾನ ಭಾಷಣ ಮಾಡಿ, ಕಾರ್ಗಿಲ್ ಯುದ್ಧ ಸಾಮಾನ್ಯ ಯುದ್ಧವಾಗಿರಲಿಲ್ಲ. ಈ ಯುದ್ಧವು ಭಾರತದ ಸ್ವಾಭಿಮಾನದ ಸಂಕೇತವಾಗಿತ್ತು. ಈ ಯುದ್ಧದಲ್ಲಿ ದೇಶದ ಸೈನಿಕರು ಮಾಡಿದ ತ್ಯಾಗ, ಬಲಿದಾನ ಅವರು ಮಾಡಿದ ಹೋರಾಟ ಎಂದಿಗೂ ಚಿರಸ್ಮರಣೀಯ ಎಂದರು.
ಅನಿಕೇತನ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಕೆ.ಎಂ. ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಕ್ಕಿಂತ ದೇಶವೇ ಮುಖ್ಯವಾಗಿದ್ದು, ಯುವಜನರು ಧಾರ್ಮಿಕ ಗೊಡ್ಡು ಸಂಪ್ರದಾಯಗಳಿಗೆ ಮರುಳಾಗದ ದೇಶ ಪ್ರೇಮವನ್ನು ನಿತ್ಯ ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಕೆ ಎಂ ಜಗದೀಶ್, ಸಂಸ್ಥಾಪಕ ಕಾರ್ಯದರ್ಶಿ ಡಾ. ರಾಮಲಿಂಗಯ್ಯ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿಯನ್ನು ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ಅವರು ಪ್ರದಾನ ಮಾಡಿದರು.
ಅನಿಕೇತನ ವಿದ್ಯಾಸಂಸ್ಥೆ ಟ್ರಸ್ಟಿ ಡಿ.ಎಸ್ .ದೇವರಾಜು, ಮಾಧ್ಯಮಿಕ ಶಿಕ್ಷಕರ ಸಂಘದ ರಾಜ್ಯ ಕಾರ್ಯದರ್ಶಿ ಚಿದಾನಂದಪಾಟೀಲ್, ರಾಜ್ಯ ಸಹಕಾರ್ಯದರ್ಶಿ, ಗಂಗಾಧರ ಆಚಾರ್ ಅತಿಥಿಗಳಾಗಿ ಭಾಗವಹಿಸಿದ್ದರು. ಎನ್ಸಿಸಿ ಆಫೀಸರ್ ಕೆ.ಆರ್ ರಾಜು, ಉಪ ಪ್ರಾಂಶುಪಾಲರಾದ ಎಂ.ಕೆ ಮಂಗಳಮ್ಮ, ಮುಖ್ಯಶಿಕ್ಷಕರಾದ ಎಸ್.ತೇಜೇಶ್ವರಿ ಸೇರಿದಂತೆ ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ದೇಶಪ್ರೇಮವನ್ನು ಪ್ರತಿಬಿಂಬಿಸುವ ನೃತ್ಯ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.