ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಆಡಳಿತ, ಸಾಧನೆ ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲಾಗುವುದೆಂದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಮಂಡ್ಯ ನಗರದ ಬಿಜೆಪಿ ಕಚೇರಿಯಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣದ ಸಂಬಂಧ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು. ನಾಡಪ್ರಭ ಕೆಂಪೇಗೌಡರ ಥೀಮ್ ಪಾರ್ಕ್ ಗಾಗಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮೃತ್ತಿಕೆಯನ್ನು ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೆಂಪೇಗೌಡರ ದೂರದೃಷ್ಟಿಯ ಆಡಳಿತದ ಭಾಗವಾಗಿ ಭಾವನಾತ್ಮಕವಾದ ಅಭಿವೃದ್ಧಿಯ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದರು.
ಕೆಂಪೇಗೌಡರು ವ್ಯವಸಾಯದಿಂದ ಹಿಡಿದು ವಿವಿಧ ವೃತ್ತಿಗೂ ಗೌರವ ನೀಡಿದ್ದರು.ಆ ವೃತ್ತಿಗಳಲ್ಲಿ ಸುಧಾರಣೆ ತಂದು ಒಳ್ಳೆಯ ಆಡಳಿತ ತರುವ ನಿಟ್ಟಿನಲ್ಲಿ ಬೆಂಗಳೂರನ್ನು ವಿವಿಧ ವೃತ್ತಿಗಳಿಗೆ ಅನುಗುಣವಾಗಿ ಉತ್ತಮವಾಗಿ ರೂಪಿಸುವ ಮೂಲಕ ದೂರದೃಷ್ಠಿಯ ನಾಡು ಕಟ್ಟಿದ್ದರು. ಈ ಕಾರಣಕ್ಕೆ ಪ್ರಗತಿಯ ಪ್ರತಿಮೆ ಎಂದು ಹೆಸರಿಡಲಾಗಿದೆ ಎಂದು ವಿವರಿಸಿದರು.
ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ಇಂದು ವಿಶ್ವ ಮಟ್ಟದಲ್ಲಿ 24ನೇ ಸ್ಥಾನ ಪಡೆದಿದೆ. ನಮಗೆಲ್ಲರಿಗೂ ಬದುಕು, ಶಕ್ತಿಯನ್ನು ಕೊಟ್ಟಿದೆ ಎಂದರು. 64 ಪೇಟೆಗಳು, ದೇವಸ್ಥಾನಗಳು, ಕೋಟೆಗಳು, ಕೆರೆ-ಕಟ್ಟೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿ ಅದ್ಬುತವಾಗಿ ಆಡಳಿತ ನೀಡಿದ್ದಲ್ಲದೆ,ಆರ್ಥಿಕ ವ್ಯವಹಾರಕ್ಕೆ ಒಂದು ನಾಣ್ಯವನ್ನೂ ಅವರು ಹೊರತಂದಿದ್ದರು ಎಂದರು.
ಇಂತಹ ವ್ಯಕ್ತಿ ಕೆಂಪೇಗೌಡರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಅವರ ಆಡಳಿತವಿದ್ದ 16 ಜಿಲ್ಲೆಗಳಲ್ಲಿ ರಥಗಳು ತೆರಳಿ ಸಂಗ್ರಹಿಸುವ ಮೃತ್ತಿಕೆಯನ್ನು ಪ್ರತಿಮೆ ಸ್ಥಾಪಿಸುವ ಸ್ಥಳದಲ್ಲಿ ನಿರ್ಮಿಸುತ್ತಿರುವ ಉದ್ಯಾನವನಕ್ಕೆ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ ಉಮೇಶ್, ಮಾಜಿ ಸಚಿವ ಬಿ.ಸೋಮಶೇಖರ್, ಸಿದ್ದರಾಮಯ್ಯ, ಮತ್ತಿತರರು ಇದ್ದರು.