Sunday, May 19, 2024

ಪ್ರಾಯೋಗಿಕ ಆವೃತ್ತಿ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ | ಸಂತ್ರಸ್ತೆ ಕಿಡ್ನ್ಯಾಪ್ ಆರೋಪಿ ಎಸ್‌ಐಟಿ ವಶಕ್ಕೆ

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಜೆಡಿಎಸ್ ಶಾಸಕ ಎಚ್.ಡಿ ರೇವಣ್ಣ ಎಸ್‌ಐಟಿ ವಶದಲ್ಲಿರುವ ಬೆನ್ನಲ್ಲೇ ಇದೀಗ ಎ2 ಆರೋಪಿ ಸತೀಶ್ ಬಾಬು ಯಾನೆ ಬಾಬಣ್ಣನನ್ನು ಎಸ್‍ಐಟಿ ಅಧಿಕಾರಿಗಳು 8 ದಿನಗಳ (ಮೇ 13) ಕಾಲ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಅಪಹರಣ ಪ್ರಕರಣ ಸಂಬಂಧ ಇಂದು ಮಧ್ಯಾಹ್ನ 3 ಗಂಟೆಗೆ ವಿಶೇಷ ತನಿಖಾ ತಂಡದ ಅಧಿಕಾರಿಗಳು ನ್ಯಾಯಾಧೀಶ ರವೀಂದ್ರಕುಮಾರ್ ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಿದರು.

ಸತೀಶ್ ಪರ ವಕೀಲರು, “ಎಸ್‍ಐಟಿ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ಮಾಹಿತಿ ನೀಡದೇ ಪ್ರಕರಣ ವರ್ಗಾವಣೆ ಮಾಡಿದ್ದಾರೆ. ತಕ್ಷಣ ಅಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಕೆಲವು ನಿಯಮ ಉಲ್ಲಂಘನೆ ಮಾಡಿದ್ದಾರೆ” ಎನ್ನುವ ಮೂಲಕ ಪೊಲೀಸ್ ಕಸ್ಟಡಿಗೆ ಆಕ್ಷೇಪಣೆ ಮಾಡಿದರು.

ಎಸ್‍ಐಟಿ ಪರ ವಕೀಲರು, “ಈ ಪ್ರಕರಣ ತುಂಬಾ ದೊಡ್ಡದಿದೆ. ಕೆಲವು ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ 10 ದಿನ ಕಸ್ಟಡಿಗೆ ಬೇಕು. ಈತನೇ ಪ್ರಕರಣಕ್ಕೆ ಮುಖ್ಯವಾದವನು. ಅಪಹರಣಕ್ಕೆ ಒಳಗಾಗದ ಮಹಿಳೆಯನ್ನು ಕೆ ಆರ್ ನಗರ ಹೊಳೆನರಸೀಪುರ ಸೇರಿ ಹಲವು ಕಡೆ ಸುತ್ತಾಡಿಸಿದ್ದಾನೆ. ಈತನೇ ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾನೆ. ಮೊದಲ ಆರೋಪಿ ಜೊತೆ ಬಿಟ್ಟಿದ್ದಾನೆ. ಅಲ್ಲದೇ, ಮೊದಲು ಆರೋಪಿ ತನ್ನ ಪತ್ನಿಯ ಬಳಿಯೂ ಮಾತನಾಡಿಸಿದ್ದಾನೆ. ಕಿಡ್ನ್ಯಾಪ್‌ನಲ್ಲಿ ಯಾರ ಪಾತ್ರವಿದೆ ಎಂಬ ಸ್ಪಷ್ಟತೆ ಬೇಕಾಗಿದೆ. ಹೀಗಾಗಿ ಇವರ ಬಳಿ ಮಾಹಿತಿ ಬೇಕು. ಅದಕ್ಕಾಗಿ ವಿಚಾರಣೆಗೆ ನಮ್ಮ ಕಸ್ಟಡಿಗೆ ನೀಡಬೇಕು” ಎಂದು ತಿಳಿಸಿದ್ದರು.

ಪ್ರಕರಣದ ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶ ರವೀಂದ್ರಕುಮಾರ್ ಕಟ್ಟಿಮನಿ, ಸತೀಶ್ ಬಾಬು ಅವರನ್ನು 8 ದಿನಗಳ ಕಾಲ ಎಸ್‍ಐಟಿ ವಶಕ್ಕೆ ಒಪ್ಪಿಸಿದ್ದಾರೆ.

ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆಯ ಪುತ್ರ ನೀಡಿದ್ದ ದೂರಿನಂತೆ ಎಫ್‌ಐಆರ್ ದಾಖಲಿಸಲಾಗಿತ್ತು. ಸಂತ್ರಸ್ತೆಯನ್ನು ಹುಡುಕಾಡಿದ್ದ ಎಸ್‌ಐಟಿ ಅಧಿಕಾರಿಗಳು, ಎಚ್ ಡಿ ರೇವಣ್ಣ ಆಪ್ತ ರಾಜಗೋಪಾಲ್ ಅವರ ತೋಟದ ಮನೆಯಲ್ಲಿ ಪತ್ತೆ ಹಚ್ಚಿದ್ದರು.

ಮೊಬೈಲ್ ಪರಿಶೀಲಿಸುತ್ತಿರುವ ಎಸ್‌ಐಟಿ

ಸಂತ್ರಸ್ತ ಮಹಿಳೆಯ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ಸತೀಶ್ ಬಾಬು ಮೊಬೈಲ್ ಅನ್ನು ಈಗಾಗಲೇ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಸತೀಶ್ ಬಾಬು ಪೊಲೀಸರಿಗೆ ಸರಿಯಾದ ಮಾಹಿತಿ ನೀಡಲು ಈ ಹಿಂದೆ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆತನ ಮೊಬೈಲ್ ಕಾಲ್ ಡಿಟೈಲ್ಸ್ ಅನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಮಹಿಳೆಯನ್ನು ಅಪಹರಣ ನಡೆಸುವುದಕ್ಕೂ ಮುನ್ನ ಯಾವೆಲ್ಲ ನಂಬರಿನಿಂದ ಕರೆ ಬಂದಿದೆ, ಈತ ಯಾರಿಗೆಲ್ಲ ಕರೆ ಮಾಡಿದ್ದ, ಎಲ್ಲೆಲ್ಲಿ ಸುತ್ತಾಡಿದ್ದ ಎಂಬ ಬಗ್ಗೆಯೂ ಮಾಹಿತಿ ಕಲೆ ಹಾಕುತ್ತಿದೆ. ಅಲ್ಲದೇ, ಸತೀಶ್ ಬಾಬು ಫೋನಿನಲ್ಲಿರುವ ಎಲ್ಲ ಡಾಟಾಗಳನ್ನು ಕೂಡ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ. ಜೊತೆಗೆ ಯಾವ ಭಾಗದಲ್ಲಿ ಸಂಚರಿಸಿದ್ದರು ಎಂಬುದರ ಬಗ್ಗೆಯೂ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ.

ಮೇ 8ರವರೆಗೆ ಎಸ್‌ಐಟಿ ವಶಕ್ಕೆ ಎಚ್ ಡಿ ರೇವಣ್ಣ

ಲೈಂಗಿಕ ದೌರ್ಜನ್ಯಕ್ಕೊಳಗಾದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರನ್ನು ಬೆಂಗಳೂರು ನ್ಯಾಯಾಲಯದ ನ್ಯಾಯಾಧೀಶರು  ಮೂರು  ದಿನಗಳ ಕಾಲ ಅಂದರೆ ಮೇ8ರವರೆಗೆ ವಿಶೇಷ ತನಿಖಾ ತಂಡದ ವಶಕ್ಕೆ ಒಪ್ಪಿಸಿ, ಭಾನುವಾರ ಕೋರಮಂಗಲದಲ್ಲಿರುವ ಹದಿನೇಳನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್‌ ಎಂ ಕಟ್ಟಿಮನಿ ಆದೇಶ ನೀಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!