ವಿಧಾನ ಪರಿಷತ್ ಸದಸ್ಯ ಮಧು.ಜಿ ಮಾದೇಗೌಡರವರ ಜನ್ಮ ದಿನೋತ್ಸವವನ್ನು ಮಂಡ್ಯನಗರದ ಮಿಮ್ಸ್ ಹೆರಿಗೆ ವಿಭಾಗದ ಆವರಣದಲ್ಲಿ ಮಧು ಜಿ.ಮಾದೇಗೌಡ ಅವರ ಅಭಿಮಾನಿಗಳು ವಿವಿಧ ಸಮಾಜಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶನಿವಾರ ಅರ್ಥಪೂರ್ಣವಾಗಿ ಆಚರಿಸಿದರು
ಮಮತೆಯ ಮಡಿಲು– ನಿತ್ಯ ಅನ್ನ ದಾಸೋಹದಲ್ಲಿ ದಾಸೋಹ, ಬಟ್ಟೆ ಕೈಚೀಲ ವಿತರಣೆ, ಸಸಿಗಳ ವಿತರಣೆ, ಮಾಸ್ಕ್ ವಿತರಣೆ, ರೋಗಿಗಳಿಗೆ ಹಣ್ಣು- ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಇಂಜಿನಿಯರ್ ಬಸವರಾಜೇಗೌಡ ಮಾತನಾಡಿ, ಜಿ.ಮಾದೇಗೌಡರು ಬದುಕಿನಲ್ಲಿ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಿದರು. ತಂದೆಯ ಹಾದಿಯಲ್ಲೇ ಅವರ ಪುತ್ರ ಮಧು ಮಾದೇಗೌಡರು ತಂದೆಯ ದಾರಿಯಲ್ಲೇ ನಡೆಯುತ್ತಿದ್ದಾರೆ ಎಂದರು.
ಮಧು ಜಿ ಮಾದೇಗೌಡ ಅವರು ಬಿಇಟಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಎಲ್ಲಾ ಆಯಾಮಗಳಲ್ಲೂ ಅಭಿವೃದ್ಧಿ ಸಾಧ್ಯವಾಗಿದೆ. ಗಾಂಧಿ ಗ್ರಾಮವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮಮತೆಯ ಮಡಿಲು ಅನ್ನದಾಸೋಹ ಕೇಂದ್ರದ ಮಂಗಲ ಎಂ.ಯೋಗೀಶ್ ಮಾತನಾಡಿ, ಜಿ.ಮಾದೇಗೌಡರ ಸಂಸದೀಯ ನಡವಳಿಕೆಗಳು ಯುವ ಜನರಿಗೆ ಆದರ್ಶವಾದದ್ದು, ಯುವಜನರಲ್ಲಿ ಇಂದು ಹೋರಾಟದ ಮನೋಭಾವ ಕ್ಷೀಣಿಸುತ್ತಿದೆ, ಅವರ ಹೋರಾಟ ಹಾಗೂ ಆದರ್ಶಗಳನ್ನು ಯುವ ಜನರಿಗೆ ತಿಳಿಸುವ ಅವಶ್ಯಕತೆಯಿದೆ. ಜಿ.ಮಾದೇಗೌಡ ಅವರ ಹೋರಾಟ ಮತ್ತು ಬದುಕು ಕುರಿತು ಪಠ್ಯ ಪುಸ್ತಕದಲ್ಲಿ ಅಳವಡಿಸುವ ಕೆಲಸವಾಗಲಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಧು ಜಿ.ಮಾದೇಗೌಡ ಅವರ ಪುತ್ರ ಆಶಯ್ ಮಧು ಮಾದೇಗೌಡ, ತಾ.ಪಂ. ಸದಸ್ಯ ಗಿರೀಶ್, ಅಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿದ್ದಪ್ಪ, ವಕೀಲರಾದ ನಂದೀಶ್, ಯೋಗಾನಂದ, ಮುಖಂಡರಾದ ಪುಟ್ಟಸ್ವಾಮಿಗೌಡ, ಕಾರ್ಕಳ್ಳಿ ಬಾಬು ಮತ್ತಿತರರು ಉಪಸ್ಥಿತರಿದ್ದರು.