ಮಲೇರಿಯಾದಂತಹ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕಾಗಿ ಇಂದಿನ ಯುವ ಸಮೂಹ ಅರಿವು ಮೂಡಿಸಿಕೊಂಡು ಶ್ರಮಿಸಬೇಕಾದುದು ಅಗತ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ಟಿ ಮಂಜುನಾಥ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಶ್ರೀರಂಗಪಟ್ಟಣ ಟೌನ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ವಿಶ್ವ ಮಲೇರಿಯಾ ದಿನಾಚರಣೆ”ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿಶ್ವ ಮಲೇರಿಯಾ ದಿನಾಚರಣೆ”2024 ರ ಕಾರ್ಯಕ್ರಮವನ್ನು “ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ವೇಗಗೊಳಿಸೋಣ”ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು ಸೊಳ್ಳೆಗಳ ನಿಯಂತ್ರಣ, ಪರಿಸರ ನೈರ್ಮಲ್ಯ, ಮಲೇರಿಯಾ ರೋಗದ ಲಕ್ಷಣಗಳು ಹಾಗೂ ಮುಂಜಾಗ್ರತ ಕ್ರಮಗಳ ಕುರಿತು ವಿವರಿಸಿದರು.
ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿ, ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ ಜ್ವರ, ಚಿಕೂನ್ ಗುನ್ಯ,ಮೆದುಳು ಜ್ವರ, ಆನೆಕಾಲು ರೋಗಗಳನ್ನು ಹರಡುವ ಸೊಳ್ಳೆಗಳಾದ ಅನಾಫಿಲಿಸ್, ಈಡಿಸ್ ಹಾಗೂ ಕ್ಯೂಲೆಕ್ಸ ಸೊಳ್ಳೆಗಳ ಜೀವನ ಚಕ್ರ ಹಾಗೂ ಸೊಳ್ಳೆಗಳ ನಿಯಂತ್ರಣಗಳ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಕೆ ಎಂ ಮಹೇಶ್ ವಹಿಸಿದ್ದರು. ಕಿರಿಯ ತರಬೇತಿ ಅಧಿಕಾರಿ ಎಸ್ ಶಿವಕುಮಾರ್, ಕೆ ಎಂ ಇಂದಿರಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಜಿ ಮೋಹನ್, ರಾಜ, ಜಿ ಬಿ ಹೇಮಣ್ಣ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಸಿ ಚಂದನ್, ಎಂ ಎನ್ ಕೃಷ್ಣೇಗೌಡ ಆಶಾ ಕಾರ್ಯಕರ್ತೆ ಅಶ್ವಿನಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.