ಕಾಂಗ್ರೆಸ್ ಪಕ್ಷದ 2ನೇ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಗಣಿಗ ಪಿ.ರವಿಕುಮಾರ್ ಅವರ ಹೆಸರನ್ನು ವರಿಷ್ಠರು ಘೋಷಣೆ ಮಾಡಿದ ಬೆನ್ನಲ್ಲೇ ಪ್ರಮುಖ ಆಕಾಂಕ್ಷಿಯಾಗಿದ್ದ ಕೀಲಾರ ರಾಧಾಕೃಷ್ಣ ಅವರ ಬೆಂಬಲಿಗರು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ರಾಧಾಕೃಷ್ಣ ಬೆಂಬಲಿಗರು ಕಾಂಗ್ರೆಸ್ ವರಿಷ್ಠರ ವಿರುದ್ಧ ಘೋಷಣೆ ಕೂಗಿ ಪಕ್ಷದ ಅನುಯಾಯಿಯಾಗಿ ಇಷ್ಟೂ ದಿನಗಳ ಕಾಲ ಪಕ್ಷ ಹಾಗೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದ ರಾಧಾಕೃಷ್ಣ ಅವರಿಗೆ ವಂಚನೆ ಮಾಡಲಾಗಿದೆ ಎಂದು ಹರಿಹಾಯ್ದರು.
ಜಾತ್ಯತೀತ ಜನತಾದಳದಲ್ಲಿದ್ದ ಕೀಲಾರ ರಾಧಾಕೃಷ್ಣ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಂಡು, ಟಿಕೆಟ್ ನೀಡುವುದಾಗಿ ಮಾತು ಕೊಟ್ಟಿದ್ದ ವರಿಷ್ಠರು ವಂಚಿಸಿದ್ದಾರೆ. ಇದರಿಂದ ಅಲ್ಲೂ ಇಲ್ಲ ಎಂಬಂತಾಗಿದೆ. ಇದರಿಂದ ರಾಧಾಕೃಷ್ಣ ಅವರಿಗೆ ರಾಜಕೀಯವಾಗಿ ಭಾರೀ ಹಿನ್ನಡೆಯಾಗಿದೆ ಎಂದು ದೂರಿದರು.
ನಾಮಪತ್ರ ಸಲ್ಲಿಸಲು ಇನ್ನೂ ಕಾಲಾವಕಾಶವಿದ್ದು, ವರಿಷ್ಠರು ಗಣಿಗ ಪಿ.ರವಿಕುಮಾರ್ ಅವರಿಗೆ ನೀಡಿರುವ ಟಿಕೆಟ್ ಅನ್ನು ವಾಪಸ್ ಪಡೆದು ಕೀಲಾರ ರಾಧಾಕೃಷ್ಣ ಅವರಿಗೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನಗರಸಭೆ ಮಾಜಿ ಸದಸ್ಯರಾದ ಆಟೋ ನಾಗರಾಜು, ಶಿವರತ್ನ, ಲೋಕೇಶ್ಗೌಡ, ಕೊಮ್ಮೇರಹಳ್ಳಿ ಪಾಪಣ್ಣ, ಕೆ.ಟಿ. ಕೃಷ್ಣ, ಸಂತೋಷ್, ಹೇಮಂತ್, ಗೀತಾ, ಕಾಂತರಾಜು, ನಾಗರಾಜು ಸೇರಿದಂತೆ ಇತರರು ಭಾಗವಹಿಸಿದ್ದರು.